Friday, August 11, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೧೦ *ಯಾಂ ಚಿಂತಯಾಮಿ ಸತತಂ...

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೧೦

*ಯಾಂ ಚಿಂತಯಾಮಿ ಸತತಂ...*

ಶತಕತ್ರಯಗಳಿಂದಾಗಿ ಕವಿ ಭರ್ತೃಹರಿಯ ಹೆಸರು ಸಂಸ್ಕೃತಲೋಕದಲ್ಲಿ ಅಜರಾಮರವಾಗಿದೆ. ವ್ಯಾಕರಣಶಾಸ್ತ್ರಜ್ಞನಾಗಿಯೂ ಅವನು ಪ್ರಸಿದ್ಧನಾಗಿದ್ದಾನೆ. ರಾಜನಾಗಿದ್ದ ಅವನು ಸಂನ್ಯಾಸಿಯಾದ ಕಥೆ ಬಹಳ ರೋಚಕವಾಗಿದೆ.

ಒಂದಿನ ಭರ್ತೃಹರಿಯ ಆಸ್ಥಾನಕ್ಕೆ ಬಂದ ಯೋಗಿಯೊಬ್ಬ ವಿಶೇಷ ಶಕ್ತಿಯನ್ನು ಹೊಂದಿದ್ದ ಹಣ್ಣೊಂದನ್ನು ರಾಜನಿಗೆ ನೀಡಿದ. ತನ್ನ ಮಡದಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ರಾಜ ಅದನ್ನು ಅವಳಿಗೆ ಕೊಟ್ಟ. ರಾಣಿಗೆ ಒಬ್ಬ ಪ್ರಿಯಕರನಿದ್ದ. ಅವಳು ಹಣ್ಣನ್ನು ಅವನಿಗೆ ವರ್ಗಾಯಿಸಿದಳು. ಆ ಪ್ರಿಯಕರನಿಗಾದರೋ ರಾಣಿಗಿಂತ ಹೆಚ್ಚು ಹತ್ತಿರವಾದ ಪ್ರಿಯತಮೆಯೊಬ್ಬಳಿದ್ದಳು. ಹಣ್ಣು ಅವಳ ಕೈ ಸೇರಿತು. ಆ ತರುಣಿಗೆ ರಾಜನಲ್ಲಿ ಪ್ರೇಮವಿತ್ತು. ಅವಳು ತಂದು ಹಣ್ಣನ್ನು ರಾಜನಿಗೊಪ್ಪಿಸಿದಳು. ಹೀಗೆ ಒಂದು ಸುತ್ತು ಹೊಡೆದು ಬಂದ ಹಣ್ಣನ್ನು ನೋಡಿ ರಾಜನಿಗೆ ಸಂಬಂಧಗಳ ನಶ್ವರತೆಯ ಅರಿವಾಯಿತು. ಬೇಸರಗೊಂದು ಹೀಗೆಂದು ಕವನಿಸಿದ.

ಯಾಂ ಚಿಂತಯಾಮಿ ಸತತಂ ಮಯಿ ಸಾ ವಿರಕ್ತಾ
ಸಾಪ್ಯನ್ಯಮಿಚ್ಛತಿ ಜನಂ ಸ ಜನೋಽನ್ಯಸಕ್ತಃ |
ಅಸ್ಮತ್ಕೃತೇ ಪರಿಶುಷ್ಯತಿ ಕಾಚಿದನ್ಯಾ
ಧಿಕ್ತಾಂ ಚ ತಂ ಚ ಮದನಂ ಚ ಇಮಾಂ ಚ ಮಾಂ ಚ ||

ನಾನು ಸದಾ ಯಾರನ್ನು ನೆನೆಯುತ್ತಿರುತ್ತೇನೆಯೋ ಅವಳಿಗೆ ನನ್ನಲ್ಲಿ ಆಸಕ್ತಿಯಿಲ್ಲ. ಅವಳು ಇನ್ನೊಬ್ಬನನ್ನು ಪ್ರೀತಿಸುತ್ತಾಳೆ, ಅವನು ಮತ್ತೊಬ್ಬಳಲ್ಲಿ ಆಸಕ್ತನಾಗಿದ್ದಾನೆ. ಅವಳು ನನಗಾಗಿ ಹಂಬಲಿಸುತ್ತಾಳೆ. ಅವಳಿಗೂ, ಅವನಿಗೂ, ಮನ್ಮಥನಿಗೂ, ಇವಳಿಗೂ ನನಗೂ ಧಿಕ್ಕಾರವಿರಲಿ.

ಈ ಘಟನೆ ಅವನು ಸಂನ್ಯಾಸ ಸ್ವೀಕರಿಸುವುದಕ್ಕೂ ವೈರಾಗ್ಯ ಶತಕವೆಂಬ ಕೃತಿಯನ್ನು ರಚಿಸುವುದಕ್ಕೂ ಕಾರಣವಾಯಿತು.

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

ಈ ಸರಣಿಯ ಎಲ್ಲ ಲೇಖನಗಳೂ www.sujnanam.blogspot.com ನಲ್ಲೂ ಲಭ್ಯ.

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...