ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
ಸನಾತನ ಭಾರತದ ಸ್ತ್ರೀರತ್ನಗಳು
ಭಾಗ - 4
ಕುಮಾರಿ ಸಂಧ್ಯಾ
ಬ್ರಹ್ಮ ಮಾನಸಪುತ್ರಿ ಸಂಧ್ಯಾ ವಿವೇಕಮತಿಯೂ ದೂರದೃಷ್ಟಿಯುಳ್ಳವಳೂ
ಆಗಿದ್ದಳು. ಚಂದ್ರಭಾಗ ಪರ್ವತದ ಬೃಹಲ್ಲೋಹಿತ ಎಂಬ ಸರೋವರದ ಬಳಿ ತಪಶ್ಚರಣೆಯ ಉದ್ದೇಶದಿಂದ
ಸದ್ಗುರುವೊಬ್ಬನ ನಿರೀಕ್ಷೆಯಲ್ಲಿದ್ದಳು. ಆಗ ಅಲ್ಲಿಗೆ ಬಂದ ವಸಿಷ್ಠ ಮಹರ್ಷಿಯಿಂದ ’ಓಂ ನಮೋ
ಭಗವತೇ ವಾಸುದೇವಾಯ’ ಎಂಬ ದ್ವಾದಶಾಕ್ಷರಿ ಮಂತ್ರದ ಉಪದೇಶವನ್ನೂ, ತಪಸ್ಸನ್ನು ಮಾಡುವ
ಪದ್ಧತಿಯನ್ನೂ ತಿಳಿದುಕೊಂಡು ಘೋರ ತಪಸ್ಸನ್ನಾಚರಿಸಿದಳು. ಅವಳ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ
ಪರಮಾತ್ಮನಲ್ಲಿ ಅವಳು ಕೇಳಿದ್ದು ಮೂರು ವರಗಳನ್ನು. ಮೊದಲನೆಯ ವರ ಲೋಕ ಕಲ್ಯಾಣಕ್ಕಾಗಿ. ’ಈ ಭೂಮಿಯ
ಮೇಲೆ ಹುಟ್ಟುವ ಯಾವುದೇ ಜೀವಿಗೆ ಹುಟ್ಟಿದಾಕ್ಷಣ ಕಾಮಭಾವನೆ ಬರದಿರಲಿ’. ಭಗವಂತ ಈ ಕೋರಿಕೆಯನ್ನು
ಮನ್ನಿಸಿ ಬಾಲ್ಯ ಕೌಮಾರ್ಯ, ಯೌವನ, ವೃದ್ಧಾಪ್ಯ ಈ ನಾಲ್ಕು ಅವಸ್ಥೆಗಳನ್ನು ಹೊಂದಿದ ಜೀವಿಗಳಿಗೆ
ಕಾಮಭಾವನೆ ಮೂರನೆಯ ಅವಸ್ಥೆಯಲ್ಲಿ ಮಾತ್ರ ಇರಲಿ ಎಂದು ಅನುಗ್ರಹಿಸುತ್ತಾನೆ. ಮನಸ್ಸು ಮಾಗುವ
ಮೊದಲೇ ಕಾಮವಿಕಾರವುಂಟಾದರೆ ಆಗುವ ಅನಾಹುತದ ಬಗ್ಗೆ ಆಗಲೇ ದೂರದೂಷ್ಟಿಯ ಚಿಂತನೆಯನ್ನು ಮಾಡಿದವಳು
ಸಂಧ್ಯಾ. ಈಗಿನ ಬಾಲಾಪರಾಧಿಗಳನ್ನು ನೋಡಿದರೆ ಅವಳು ಪಡೆದ ವರ ಪ್ರಭಾವವು ಕಡಿಮೆಯಾಗಿದೆಯೇನೋ
ಅನ್ನಿಸುತ್ತದೆ.
ಎರಡನೆಯ ವರದಿಂದ ಅಖಂಡ ಮುತ್ತೈದೆತನವನ್ನೂ, ಮೂರನೆಯ ವರದಿಂದ ಪತಿಯ
ಹೊರತು ಇನ್ಯಾರಾದರೂ ಅವಳನ್ನು ಕಾಮದೃಷ್ಟಿಯಿಂದ ನೋಡಿದರೆ ನಪುಂಸಕರಾಗುವಂತೆಯೂ ವರವನ್ನು
ಪಡೆಯುತ್ತಾಳೆ. ತನ್ಮೂಲಕ ಪರಸ್ತ್ರೀಯನ್ನು ಕಾಮುಕ ದೃಷ್ಟಿಯಿಂದ ನೋಡುವವರ ಪುರುಷತ್ವವನ್ನೇ
ನಾಶಗೊಳಿಸಿ ಶಿಕ್ಷಿಸಬೇಕು ಎಂಬುದನ್ನು ಸೂಚ್ಯವಾಗಿ ಹೇಳಿದವಳು ಈ ಧೀರ ಕುಮಾರಿ. ಸ್ತ್ರೀ
ಸಬಲೀಕರಣದ ಮೊತ್ತಮೊದಲ ಕ್ರಾಂತಿಕಾರಿಯಂತೆ ಗೋಚರವಾಗುತ್ತಾಳೆ ಅವಳು.
ವಿಷ್ಣುವಿನ
ಸಲಹೆಯಂತೆ ತನಗೆ ಮಾರ್ಗದರ್ಶನ ಮಾಡಿದ ವಸಿಷ್ಠಮಹರ್ಷಿಯೇ ಪತಿಯಾಗಬೇಕೆಂದು ಸಂಕಲ್ಪಿಸಿ ಮೇಧಾತಿಥಿ
ಮಹರ್ಷಿಯ ಯಜ್ಞವನ್ನು ದಿವ್ಯರೂಪದಲ್ಲಿ ಪ್ರವೇಶಿಸುತ್ತಾಳೆ. ಅವಳ ಭೌತಿಕದೇಹವನ್ನು ಎರಡಾಗಿ ಮಾಡಿ
ತನ್ನ ರಥದ ಇಕ್ಕೆಲಗಳಲ್ಲಿ ಸ್ಥಾಪಿಸಿದ ಸೂರ್ಯ ಪ್ರಾತ:ಸಂಧ್ಯಾ ಮತ್ತು ಸಾಯಂ ಸಂಧ್ಯಾ ಎಂಬ ಎರಡು
ಸಂಧ್ಯಾಕಾಲಗಳನ್ನು ನಿರ್ಮಿಸಿದ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಅದೇ ಅಗ್ನಿಯಲ್ಲಿ ಪುನರ್ಜನ್ಮ
ಪಡೆದು ಅರುಂಧತಿಯೆಂದು ನಾಮಕರಣಗೊಡ ಸಂಧ್ಯಾಕುಮಾರಿ ಮುಂದೆ ವಸಿಷ್ಠನನ್ನು ವರಿಸುತ್ತಾಳೆ.
No comments:
Post a Comment