ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
ಸನಾತನ ಭಾರತದ ಸ್ತ್ರೀರತ್ನಗಳು
ಭಾಗ - 5
ಅನುಪಮ
ಸಾಧ್ವಿ ಅರುಂಧತಿ
ಕರ್ದಮ ದೇವಹೂತಿಯರ ಎಂಟನೆಯ
ಕನ್ಯೆ ಅರುಂಧತಿ. ಸಪ್ತರ್ಷಿಗಳಲ್ಲಿ ಅಗ್ರಗಣ್ಯನಾದ ವಸಿಷ್ಠನ ಧರ್ಮಪತ್ನಿ. ವಿದ್ಯಾ ವಿವೇಕಗಳಿಂದ
ಋಷಿ ಮಂಡಲದಲ್ಲಿ ಅಪಾರ ಗೌರವವನ್ನು ಗಳಿಸಿಕೊಂಡಿದ್ದಳು.
ಇನ್ನೊಂದು ಮೂಲದ ಪ್ರಕಾರ
ಮೇಧಾತಿಥಿ ಮಹರ್ಷಿ ಅರುಂಧತಿಯ ಜನಕ. ವಸಿಷ್ಠನನ್ನೇ ಪತಿಯಾಗಿ ಸಂಕಲ್ಪಿಸಿ ಯಜ್ಞಕುಂಡದಲ್ಲಿ
ದೇಹತ್ಯಾಗ ಮಾಡಿ ಅಲ್ಲಿಂದಲೇ ಪುನರ್ಜನ್ಮ ಪಡೆದ ಸಂಧ್ಯಾ ಕುಮಾರಿಯೇ ಅರುಂಧತಿಯೆಂದು ಈ ಕಥೆ
ಹೇಳುತ್ತದೆ. ಸಾವಿತ್ರೀದೇವಿ ಹಾಗೂ ಬಹುಲಾದೇವಿಯಲ್ಲಿ ವಿದ್ಯಾಭ್ಯಾಸ ಮಾಡಿದ ಅರುಂಧತಿ ಸಕಲಜ್ಞಾನ
ಸಂಪನ್ನೆಯಾಗಿದ್ದಳು.
ತನ್ನ ನೂರು ಮಕ್ಕಳನ್ನು
ವಿಶ್ವಾಮಿತ್ರ ಶಾಪದಿಂದ ಕೊಂದಾಗಲೂ ಸಹನೆ ಮೀರದೆ ಅವನನ್ನು ಕ್ಷಮಿಸಿದ ಸಾಧ್ವಿ. ಮುಂದೆ ಹುಟ್ಟಿದ
ಶಕ್ತಿ ಎಂಬ ಮಗ ವಿಶ್ವಾಮಿತ್ರನ ಕುತಂತ್ರಕ್ಕೆ ಬಲಿಯಾದಾಗಲೂ ಸಹಿಸಿಕೊಂಡಿದ್ದಳು. ಇವಳ ಕೊನೆಯ ಮಗ
ಸುಯಜ್ಞ ರಾಮನ ಸಹಪಾಠಿ.
ರಾಮಾಯಣದಲ್ಲಿ ಅರುಂಧತಿ
ಸೀತೆಗೆ ದಾಂಪತ್ಯ ಜೀವನದ ಬಗ್ಗೆ ಉಪದೇಶವನ್ನು ನೀಡುತ್ತಾಳೆ. ಅಗ್ನಿ ಪತ್ನಿ ಸ್ವಾಹಾ ಸಪ್ತರ್ಷಿಗಳ
ಪತ್ನಿಯರ ರೂಪವನ್ನು ತಳೆಯುತ್ತಿದ್ದಳು. ಆದರೆ ಅರುಂಧತಿಯ ರೂಪವನ್ನು ಮಾತ್ರ ತಳೆಯಲು
ಆಗುತ್ತಿರಲಿಲ್ಲ. ಅದಕ್ಕೆ ಕಾರಣ ಅರುಂಧತಿಯ ವಿಶಿಷ್ಟ ವ್ಯಕ್ತಿತ್ವ ಹಾಗೂ ಅಗಾಧ ಪಾಂಡಿತ್ಯ ಸೋತ
ಸ್ವಾಹಾ ಬಹುವಿಧವಾಗಿ ಅರುಂಧತಿಯನ್ನು ಸ್ತುತಿಸುತ್ತಾಳೆ. ಇಂದ್ರಾದಿ ದೇವತೆಗಳಿಗೂ ಅರುಂಧತಿ
ಗೃಹಸ್ಥಧರ್ಮದ ಬಗ್ಗೆ ಉಪದೇಶ ನೀಡಿದ್ದಳು.
ವಸಿಷ್ಠ-ಅರುಂಧತಿಯರ ದಾಂಪತ್ಯ
ಸಾರ್ವಕಾಲಿಕ ಆದರ್ಶವಾಗಿ ನಿಂತಿದೆ. ವಿವಾಹದಲ್ಲಿ ಅರುಂಧತೀಪೂಜೆ ಹಾಗೂ ಅರುಂಧತೀ ನಕ್ಷತ್ರ ದರ್ಶನ
ದಾಂಪತ್ಯಜೀವನದಲ್ಲಿ ಶುಭವನ್ನುಂಟುಮಾಡುತ್ತವೆ ಎಂಬ ನಂಬಿಕೆಯಿದೆ.
No comments:
Post a Comment