Wednesday, March 8, 2017

ಲೋಪಾಮುದ್ರಾ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
ಸನಾತನ ಭಾರತದ ಸ್ತ್ರೀರತ್ನಗಳು
ಭಾಗ - ೬
ಲೋಪಾಮುದ್ರಾ
ವೈದಿಕ ಕಾಲದ ಗೌರಾನ್ವಿತ ವೇದದೃಷ್ಟಾರ ನಾರಿಯರಲ್ಲಿ ಅಗಸ್ತ್ಯಪತ್ನಿ ಲೋಪಾಮುದ್ರೆಗೆ ಮಹತ್ತ್ವದ ಸ್ಥಾನವಿದೆ. ಲೋಪಾಮುದ್ರೆಯನ್ನು ವಿವಿಧಪ್ರಾಣಿಗಳ ವಿಶಿಷ್ಟ ಅಂಗಗಳಿಂದ (ಜಿಂಕೆಯ ಕಣ್ಣು, ನವಿಲಿನ ಲಾಸ್ಯ, ಮಲ್ಲಿಗೆಯ ಹಾಸ, ಸಿಂಹದ ಸೊಂಟ, ಕೋಗಿಲೆಯ ಕಂಠ.....) ಅಗಸ್ತ್ಯರೇ ಸೃಷ್ಟಿಸಿದ್ದು. ಹಾಗಾಗಿ ಅವಳು ಅಪ್ರತಿಮ ಸುಂದರಿಯಾಗಿ ರೂಪುಗೊಂಡಳು. ಅವಳು ಬೆಳೆದಿದ್ದು ಮಾತ್ರ ವೈದರ್ಭರಾಜ ಹಾಗೂ ದಾಕ್ಷಾಯಣಿಯರ ಸಾಕು ಮಗಳಾಗಿ ಅರಮನೆಯಲ್ಲಿ. ಸಕಲ ವೇದ ಶಾಸ್ತ್ರಗಳನ್ನೂ ಅಧ್ಯಯನ ಮಾಡಿದ ಅವಳು ಪ್ರಾಪ್ತವಯಸ್ಕಳಾದಾಗ ಅಗಸ್ತ್ಯರು ಮತ್ತೆ ರಾಜನ ಆಸ್ಥಾನಕ್ಕೆ ಬಂದು ಅವಳನ್ನು ಮದುವೆ ಮಾಡಿಕೊಡುವಂತೆ ಕೇಳುತ್ತಾರೆ. ರಾಜನು ಮನಸ್ಸಿಲ್ಲದೆ ಮೀನ ಮೇಷ ಎಣಿಸುತ್ತಿರುವಾಗ ಲೋಪಾಮುದ್ರೆ ಸ್ವತ: ಒಪ್ಪಿ ಆಭರಣಾದಿಗಳನ್ನು ಕಳಚಿ ಅಗಸ್ತ್ಯರ ಜೊತೆ ಹೊರಟಳು.

ತನ್ನ ಗೃಹಿಣೀಧರ್ಮವನ್ನು ಶ್ರದ್ಧೆಯಿಂದ ಪಾಲಿಸುತ್ತಿದ್ದ ಲೋಪಾಮುದ್ರೆಗೆ ಗಂಡನ ಜಡತೆ ಬೇಸರ ತಂದಿತ್ತು. ತನ್ನ ಪಿತೃಗಳನ್ನು ತಲೆಕೆಳಗಾಗಿ ನೇತಾಡುವ ಶಿಕ್ಷೆಯಿಂದ ಪಾರುಮಾಡಲು ಸಂತಾನವನ್ನು ಪಡೆಯುವ ಅನಿವಾರ್ಯತೆಯನ್ನು ಕೂಡ ಅಗಸ್ತ್ಯರು ಮರೆತಿದ್ದರು. ವೇದಾಭ್ಯಾಸಜಡನಾಗಿದ್ದ ಗಂಡನಿಗೆ ವೈದಿಕ ಮಂತ್ರದ ಮೂಲಕವೇ ಚುರುಕುಮುಟ್ಟಿಸಲು ಸೂಕ್ತವೊಂದನ್ನು ರಚಿಸಿದಳು. ರತಿದೇವಿಯ ಕುರಿತಾದ ಈ ಋಗ್ವೇದಸೂಕ್ತ(೧ ನೇ ಮಂಡಲ, ೧೭೯ನೇ ಸೂಕ್ತ)ದಲ್ಲಿ ಆರು ಮಂತ್ರಗಳಿದ್ದು ಮೊದಲ ಎರಡು ಲೋಪಾಮುದ್ರೆಯಿಂದ, ನಂತರದ ಎರಡು ಅಗಸ್ತ್ಯರಿಂದ ಹಾಗೂ ಕೊನೆಯ ಎರಡು ಪತಿಪತ್ನಿಯರ ಸಂಭಾಷಣೆಯನ್ನು ಅಕಸ್ಮಾತ್ತಾಗಿ ಕೇಳಿದ ಶಿಷ್ಯನಿಂದ ರಚಿಸಲ್ಪಟ್ಟಿವೆ.

ಮಹಾಭಾರತದ ಅರಣ್ಯಪರ್ವದಲ್ಲಿ ಬರುವ ಕಥೆಯ ಪ್ರಕಾರ ಅಗಸ್ತ್ಯರು ಲೋಪಾಮುದ್ರೆಯ ಸೌಂದರ್ಯದಿಂದ ಕಾಮಾತುರರಾಗಿದ್ದ ಸಂದರ್ಭದಲ್ಲಿ ಲೋಪಾಮುದ್ರೆಯು ತಾನು ತ್ಯಾಗ ಮಾಡಿದ ಆಭರಣಗಳನ್ನು ಸಂಪಾದಿಸಿ ತಂದುಕೊಡುವವರೆಗೆ ತನ್ನನ್ನು ಒಪ್ಪಿಸಿಕೊಳ್ಳಲಾರೆ ಎನ್ನುತ್ತಾಳೆ. ಅರ್ಥಸಂಗ್ರಹವೂ ಗೃಹಸ್ಥನಾದವ ಸಾಧಿಸಬೇಕಾದ ಒಂದು ಪುರುಷಾರ್ಥ ಎಂಬುದಾಗಿ ಮನವರಿಕೆ ಮಾಡಿ ಕೊಡುತ್ತಾಳೆ. ಅಗಸ್ತ್ಯರು ಇಲ್ವಲನಲ್ಲಿಗೆ ಹೋಗಿ ಹಣವನ್ನು ತರುತ್ತಾರೆ. ಆ ನಂತರ ಅವರಿಗೆ ದೃಢಸ್ಯು ಎಂಬ ಮಗ ಜನಿಸುತ್ತಾನೆ.

ದಕ್ಷಿಣಭಾರತದಲ್ಲಿ ಲೋಪಾಮುದ್ರೆಯ ಕುರಿತು ಜಾನಪದ ಕಥೆ ಪ್ರಚಲಿತವಿದೆ. ದಕ್ಷಿಣ ಭಾರತದಲ್ಲಿ ಘೋರವಾದ ಬರಗಾಲ ಬಂದಿತ್ತು. ನೀರಿಲ್ಲದೆ ಹಾಹಾಕಾರ ಎದ್ದಿತ್ತು. ಅದನ್ನು ತಿಳಿದ ಲೋಪಾಮುದ್ರೆ ಜನರ ಕಷ್ಟವನ್ನು ನೀಗುವಂತೆ ಅಗಸ್ತ್ಯರನ್ನು ಕೇಳಿಕೊಂಡಳು. ಅಗಸ್ತ್ಯರು ಲೋಪಾಮುದ್ರೆಯನ್ನು ನೀರಿನರೂಪದಲ್ಲಿ ಕಮಂಡಲುವಿನಲ್ಲಿರಿಸಿಕೊಂಡು ತಪಸ್ಸಿಗೆ ಕುಳಿತರು. ಗಣೇಶನ ತಂತ್ರದಿಂದ ಕಮಂಡಲು ಮಗುಚಿಬಿದ್ದು ನೀರು ಹರಿಯಲು ಆರಂಭಿಸಿತು. ಅದೇ ಮುಂದೆ ಕಾವೇರಿ ನದಿಯೆಂದು ಪ್ರಸಿದ್ಧವಾಯಿತು.


ಲಲಿತಾ ಸಹಸ್ರನಾಮವನ್ನು ಜಗತ್ತಿನಲ್ಲಿ ಪ್ರಸಾರ ಮಾಡಿದ ಕೀರ್ತಿಯೂ ಲೋಪಾಮುದ್ರೆಗಿದೆ. ದೇವಗುರು ಬೃಹಸ್ಪತಿಯೇ ಮೊದಲಾದವರು ಅವಳ ಪಾದಚಿಹ್ನೆಗಳನ್ನು ಕಣ್ಣಿಗೆ ಒತ್ತಿಕೊಳ್ಳುತ್ತಿದ್ದರು. ಅಷ್ಟು ಗೌರವಸ್ಥಾನ ಲೋಪಾಮುದ್ರೆಗಿತ್ತು.

No comments:

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...