Wednesday, March 8, 2017

ಗೃಹಿಣಿಯರ ಅಗ್ರಣಿ ಅನಸೂಯೆ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
ಸನಾತನ ಭಾರತದ ಸ್ತ್ರೀರತ್ನಗಳು

ಭಾಗ - 3

ಗೃಹಿಣಿಯರ ಅಗ್ರಣಿ ಅನಸೂಯೆ
ದೇವಹೂತಿ ಹಾಗೂ ಕರ್ದಮಮುನಿಯ ಮಗಳಾದ ಅನಸೂಯಾ ಹೆಸರಿಗೆ ತಕ್ಕಂತೆ ಅಸೂಯಾದಿ ದುರ್ಗುಣರಹಿತ ಸಾಧ್ವಿ ಶಿರೋಮಣಿಯಾಗಿದ್ದಳು. ತಾಯಿಯಿಂದ ಸಕಲ ಕನ್ಯಾಸಂಸ್ಕಾರಗಳನ್ನು ಪಡೆದುಕೊಂಡು ಬ್ರಹ್ಮ ಮಾನಸಪುತ್ರನೂ ಸಪ್ತರ್ಷಿಗಳಲ್ಲಿ ಒಬ್ಬನೂ ಆದ ಅತ್ರಿ ಮಹರ್ಷಿಯನ್ನು ವರಿಸಿದಳು.

ಪತಿಯ ಸಕಲ ಧಾರ್ಮಿಕ ಕಾರ್ಯಗಳಲ್ಲಿ, ಆಧ್ಯಾತ್ಮಿಕ ಸಾಧನೆಯಲ್ಲಿ ಸಹಚಾರಿಣಿಯಾಗಿ, ಅತಿಥಿ ಸತ್ಕಾರಾದಿ ಗೃಹಿಣೀಧರ್ಮವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ ಅನಸೂಯೆಯ ಬಗ್ಗೆ ಮೂರು ಲೋಕಗಳಲ್ಲೂ ಆದರಭಾವವಿತ್ತು. ನಾರದರಿಂದ ಅವಳ ಹಿರಿಮೆಯನ್ನು ಕೇಳಿ ತ್ರಿಮೂರ್ತಿಗಳ ಪತ್ನಿಯರಿಗೆ ಅಸೂಯೆಯುಂಟಾಯಿತು. ತ್ರಿಮೂರ್ತಿಗಳು ಅನಸೂಯೆಯ ಪರೀಕ್ಷೆಗಾಗಿ ಕಣಕ್ಕಿಳಿದರು. ಸಂನ್ಯಾಸಿಗಳ ವೇಷದಲ್ಲಿ ಅತ್ರಿ ಆಶ್ರಮವನ್ನು ಪ್ರವೇಶಿಸಿದರು. ಅವರನ್ನು ಸತ್ಕರಿಸಿದ ಅನಸೂಯೆ ಭೋಜನವನ್ನು ನೀಡಲು ಅಣಿಯಾದಾಗ ವಿವಸ್ತ್ರಳಾಗಿ ಬಡಿಸಿದರೆ ಮಾತ್ರ ಉಣ್ಣುವುದಾಗಿ ಪಟ್ಟು ಹಿಡಿದರು. ಅತಿಥಿಗಳ ಅಭಿಲಾಷೆಯನ್ನು ಪೂರ್ತಿಗೊಳಿಸುವುದೇ ಇಲ್ಲ ಸತೀಧರ್ಮವನ್ನು ಪಾಲಿಸುವುದೇ ಎಂಬ ಧರ್ಮಸಂಕಟದ ಆ ಪರಿಸ್ಥಿತಿಯಲ್ಲೂ ಅನಸೂಯೆಯ ಮುಖದಲ್ಲಿ ಮಂದಹಾಸ ಮೂಡಿತು. ತನ್ನ ಅದಮ್ಯ ಅಂತ:ಶಕ್ತಿಯ ಮೇಲೆ ಅವಳಿಗೆ ವಿಶ್ವಾಸವಿತ್ತು. ಪತಿಯ ಕಮಂಡಲುವಿನಿಂದ ನೀರನ್ನು ತೆಗೆದು ಮೂವರ ಮೇಲೂ ಪ್ರೋಕ್ಷಿಸಿದಳು. ತಕ್ಷಣ ತ್ರಿಮೂರ್ತಿಗಳು ಹಾಲುಗಲ್ಲದ ಮುಗ್ಧ ಹಸುಳೆಗಳಾದರು. ಅನಸೂಯೆಯಲ್ಲಿ ಮಾತೃಭಾವ ಜಾಗೃತವಾಯಿತು. ಮೂವರಿಗೂ ಸ್ತನ್ಯಪಾನ ಮಾಡಿಸಿದಳು. ಧುತ್ತೆಂದು ಎರಗಿದ್ದ ಸಂದಿಗ್ಧತೆಯನ್ನು ವಿವೇಕದಿಂದ, ಚಾಕಕ್ಯತೆಯಿಂದ ಎದುರಿಸಿದ ಅನಸೂಯೆ ತ್ರಿಮೂರ್ತಿಗಳ ತಾಯಿಯಾದಳು.

ತಮ್ಮ ಗಂಡಂದಿರನ್ನು ಹುಡುಕುತ್ತ ಬಂದ ಸರಸ್ವತಿ, ಲಕ್ಷ್ಮಿ ಪಾರ್ವತಿಯರಿಗೆ ಕಾಣಿಸಿದ್ದು ಅನಸೂಯೆಯ ಜೋಗುಳದನಿಯಿಂದ ತೊಟ್ಟಿಲಲ್ಲಿ ನಿದ್ದೆಹೋದ ಶಿಶುಗಳು. ಪರಿಸ್ಥಿಯನ್ನು ಅರಿತ ಅವರಿಗೆ ಅನಸೂಯೆಗೆ ಶರಣಾಗುವುದನ್ನು ಬಿಟ್ಟರೆ ಬೇರೆ ದಾರಿಯಿರಲಿಲ್ಲ. ಅವರ ಅರಿಕೆಯನ್ನು ಮನ್ನಿಸಿ ಮಂತ್ರಜಲದಿಂದ ಶಿಶುಗಳನ್ನು ಮತ್ತೆ ತ್ರಿಮೂರ್ತಿಗಳನ್ನಾಗಿಸಿ ಬೀಳ್ಕೊಟ್ಟಳು. ಮುಂದೆ ಬ್ರಹ್ಮ ವಿಷ್ಣು ಮಹೇಶ್ವರರ ಅಂಶದಿಂದ ಕ್ರಮವಾಗಿ ಚಂದ್ರ, ದತ್ತ ಹಾಗೂ ದೂರ್ವಾಸ ಎಂಬ ಮೂವರು ಮಕ್ಕಳನ್ನು ಪಡೆದಳು.

ಕೌಶಿಕನೆಂಬ ಕುಷ್ಠರೋಗ ಪೀಡಿತ ಬ್ರಾಹ್ಮಣ ಮಾಂಡವ್ಯ ಮಹರ್ಷಿಯಿಂದ ’ಸೂರ್ಯೋದಯವಾಗುವುದರೊಳಗೆ ಸಾಯಿ’ ಎಂದು ಶಾಪವನ್ನು ಪಡೆದಾಗ ಅವನ ಪತ್ನಿ ಶಾಂಡಿಲಿ ತನ್ನ ಶಕ್ತಿಯಿಂದ ಸೂರ್ಯೋದಯವನ್ನೇ ತಡೆಹಿಡಿದಿದ್ದಳು. (ಶಾಂಡಿಲಿಯ ಕಥೆಯನ್ನು ವಿಸ್ತರವಾಗಿ ಮುಂದೆ ನೋಡೋಣ) ದೇವತೆಗಳಿಂದ ಪ್ರಾರ್ಥಿತಳಾದ ಅನಸೂಯೆ ಅಲ್ಲಿಗೆ ತೆರಳಿ ಕೌಶಿಕನ ಶಾಪ ವಿಮೋಚನೆಯನ್ನು ಮಾಡಿ ದಿನಕರನ ವ್ಯಾಪಾರವನ್ನು ಸುಗಮಗೊಳಿಸಿದಳು.

ಅತ್ರಿ-ಅನಸೂಯೆಯರ ಆಶ್ರಮವಿದ್ದದ್ದು ಚಿತ್ರಕೂಟದಲ್ಲಿ. ಸೀತಾ-ರಾಮ-ಲಕ್ಷ್ಮಣರು ವನವಾಸದಲ್ಲಿದಾಗ ಆಶ್ರಮಕ್ಕೆ ಭೇಟಿಯನ್ನಿತ್ತಿದ್ದರು. ಸೀತೆಗೆ ಅನಸೂಯೆ ಮಾಡಿದ ಗೃಹಿಣೀ ಧರ್ಮೋಪದೇಶವನ್ನು ರಾಮಾಯಣದಲ್ಲಿ ಕಾಣಬಹುದು. ಉತ್ತಮ ಸೌಂದರ್ಯತಜ್ಞೆಯೂ ಆಗಿದ್ದ ಅನಸೂಯೆ ಸೀತೆಗೆ ಸೌಂದರ್ಯವರ್ಧಕ ಗಿಡಮೂಲಿಕೆಗಳನ್ನೂ ನೀಡಿದಳು ಎಂಬ ಉಲ್ಲೇಖ ರಾಮಾಯಣದಲ್ಲಿದೆ.

ಚಿತ್ರಕೂಟದಲ್ಲಿ ಭೀಕರ ಕ್ಷಾಮವುಂಟಾದಾಗ ಮಂದಾಕಿನಿ ನದಿ ಅಲ್ಲಿ ಹರಿಯುವಂತೆ ಮಾಡಿದವಳು ಅನಸೂಯೆ. ಒಟ್ಟಿನಲ್ಲಿ ತನ್ನ ವಿವೇಕ, ವಾತ್ಸಲ್ಯ, ಸಹನೆ, ಆತ್ಮವಿಶ್ವಾಸ, ಪತಿನಿಷ್ಠೆಗಳಿಂದ ಗೃಹಿಣಿಯರಿಗೆ ಆದರ್ಶವಾಗಿ ನಿಲ್ಲುವವಳು ಸತಿ ಅನಸೂಯೆ. ಇಂತಹ ಮಹಿಮಾನ್ವಿತ ನಾರಿಯರನ್ನು ಕುರಿತು ಬ್ರಹ್ಮ ವೈವರ್ತಕ ಪುರಾಣದಲ್ಲಿ ಹೀಗೆ ಹೇಳಲಾಗಿದೆ:
ಪೃಥಿವ್ಯಾಂ ಯಾನಿ ತೀರ್ಥಾನಿ ಸತೀಪಾದೇಷು ತಾನ್ಯಪಿ |
ತೇಜಶ್ಚ ಸರ್ವದೇವಾನಾಂ ಮುನೀನಾಂ ಚ ಸತೀಷು ಚ ||
ಭೂಮಿಯಲ್ಲಿರುವ ಎಲ್ಲ ತೀರ್ಥಗಳು ಸತಿಯರ ಪಾದಗಳಲ್ಲಿವೆ. ಸರ್ವ ದೇವತೆಗಳ ಹಾಗೂ ಮುನಿಗಳ ತೇಜಸ್ಸು ಸಾಧ್ವಿಯರಲ್ಲಿರುತ್ತದೆ.

No comments:

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...