ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
ಸನಾತನ ಭಾರತದ ಸ್ತ್ರೀರತ್ನಗಳು
ಭಾಗ - 2
ದೈವೀಗುಣ
ಸಂಪನ್ನೆ ದೇವಹೂತಿ
ಸ್ವಾಯಂಭು ಮನು ಮತ್ತು
ಶತರೂಪೆಯ ಮೂವರು ಹೆಣ್ಣುಮಕ್ಕಳಲ್ಲಿ ಒಬ್ಬಳು ದೇವಹೂತಿ. ನಾರದರಿಂದ ಕರ್ದಮ ಋಷಿಯ ಗುಣಸಂಪನ್ನತೆಯನ್ನು
ಕೇಳಿ ಅವನನ್ನೇ ವರಿಸಿದಳು. ಪೃಥ್ವಿಯ ಮೊದಲ ರಾಜನ ಮಗಳಾಗಿದ್ದರೂ ಸಂಪತ್ತಿನ ಭೋಗಕ್ಕೆ ಮಾರು
ಹೋಗದೆ ಜ್ಞಾನಧನನೂ ತಪೋಧನನೂ ಆದ ಮಹರ್ಷಿಯನ್ನು ವರಿಸಿದ್ದು ಅವಳ ಪ್ರಬುದ್ಧತೆಗೆ ಸಾಕ್ಷಿ. ಸ್ವತ:
ಅವಳೇ ತಂದೆ ತಾಯಿಯರನ್ನು ಕರೆದುಕೊಂಡು ಕರ್ದಮನ ಆಶ್ರಮಕ್ಕೆ ಹೋಗುವುದು ಅಂದಿನ ಕಾಲದ ಸ್ತ್ರೀ
ಸ್ವಾತಂತ್ರ್ಯವನ್ನು ಎತ್ತಿ ತೋರಿಸುತ್ತದೆ.
ರಾಜಕುವರಿ ದೇವಹೂತಿಯ ಸಂತೋಷಕ್ಕಾಗಿ
ಕರ್ದಮ ತನ್ನ ತಪ:ಶ್ಶಕ್ತಿಯಿಂದ ದಿವ್ಯ ವಿಮಾನವೊಂದನ್ನು ನಿರ್ಮಿಸಿದ. ಅದರಲ್ಲಿ ಸ್ವಲ್ಪ ಕಾಲ
ವಿಹರಿಸಿದರೂ ಅವಳಿಗೆ ಆ ಭೋಗ ಬೇಡವೆನಿಸಿತು. ದಾಂಪತ್ಯದ ಬಹುಭಾಗ ತಪಶ್ಚರ್ಯದಲ್ಲೇ ಮುಗಿದು ಹೋದರೂ
ದೇವಹೂತಿಯು ಕಲಾ, ಅನಸೂಯಾ, ಅರುಂಧತಿ, ಶ್ರದ್ಧಾ, ಹವಿರ್ಭೂಗತಿ, ಕ್ರಿಯಾ, ಶಾಂತಿ, ಖ್ಯಾತಿ
ಮತ್ತು ಗತಿ ಎಂಬ ಒಂಭತ್ತು ಹೆಣ್ಣುಮಕ್ಕಳಿಗೆ ಜನ್ಮವಿತ್ತಳು. ಅವರೆಲ್ಲರಿಗೂ ಉತ್ತಮ
ಸಂಸ್ಕಾರವನ್ನು ನೀಡಿ ವ್ಯಕ್ತಿತ್ವವನ್ನು ರೂಪಿಸಿದಳು.
ಹೆಣ್ಣು ಮಕ್ಕಳ ಜನನದ ನಂತರ
ಮತ್ತೆ ತಪಸ್ಸಿಗೆ ಹೊರಟು ನಿಂತ ಕರ್ದಮನಿಗೆ ದೇವಹೂತಿಯು ತಂದೆಯಾದವನ ಕರ್ತವ್ಯವನ್ನು
ಜ್ಞಾಪಿಸುತ್ತಾಳೆ. ಅವಳ ತರ್ಕಬದ್ಧ ವಾದಕ್ಕೆ ಸೋತ ಕರ್ದಮ ಅವಳೊಟ್ಟಿಗೆ ಸಂಸಾರವನ್ನು
ಮುಂದುವರಿಸುತ್ತಾನೆ. ನಂತರ ದೇವಹೂತಿಯು ’ಕಪಿಲ’ ಎಂಬ ಮಹಾಜ್ಞಾನಿ ಪುತ್ರನಿಗೆ ಜನ್ಮವೀಯುತ್ತಾಳೆ.
ರಾಮಚರಿತ ಮಾನಸದಲ್ಲಿ ತುಲಸೀದಾಸರು ಶ್ರೀಹರಿಯೇ ದೇವಹೂತಿಯ ಮಗನಾಗಿ ಅವತಾರವೆತ್ತಿದ್ದಾನೆ ಎಂದು
ವರ್ಣಿಸಿದ್ದಾರೆ.
ದೇವಹೂತಿಯು ಮನುವಿನ ಕನ್ನೆ
ಕರ್ದಮ ಮುನಿಯ ಪ್ರೇಮಸಂಪನ್ನೆ |
ಆದಿದೇವ ಪ್ರಭು ದೀನ ದಯಾಳು
ಉದರದಲಿ ಜನಿಸಿದನು ಕಪಿಲ ಕೃಪಾಳು ||
(ತುಲಸೀದಾಸರ ಪದ್ಯದ ಭಾವಾನುವಾದ)
ದೇವಹೂತಿಯು ಜೀವನದ ಕೊನೆಯ
ಭಾಗದಲ್ಲಿ ಮಗನಿಂದಲೇ ತತ್ತ್ವಜ್ಞಾನದ ಉಪದೇಶ ಪಡೆದು ಸಾಯುಜ್ಯವನ್ನು ಪಡೆಯುತ್ತಾಳೆ.
No comments:
Post a Comment