Wednesday, September 16, 2026

ಸ್ನೇಹ-ಸ್ಪರ್ಧೆ

 

’ನಿನ್ನ ಲಿಟರರಿ ಕ್ರಿಟಿಸಿಸಮ್ ನೋಟ್ಸ್ ಕೊಡ್ತಿಯಾ? ಝೆರೊಕ್ಸ್ ಮಾಡಿಸಿಕೊಳ್ಳುತ್ತೇನೆ’ ಸಹಾಧ್ಯಾಯಿನಿ ಸುನೀತಾ ಹೀಗೆ ಕೇಳಿದಾಗ ಸುಜಯನಿಗೆ ಆಶ್ಚರ್ಯ. ಅವರಿಬ್ಬರೂ ಮಾನಸ ಗಂಗೋತ್ರಿಯಲ್ಲಿ ಇಂಗ್ಲೀಷ್ ಎಮ್.ಏ. ಅಂತಿಮವರ್ಷದ ವಿದ್ಯಾರ್ಥಿಗಳು. ಉತ್ತಮ ಸ್ನೇಹಿತರು. ಹರಟೆ, ಓದು ಎರಡನ್ನೂ ಒಟ್ಟಾಗಿ ಮಾಡುವವರು. ಇವರ ಮಧ್ಯೆ ಅಂತಿಮ ವರ್ಷದ ಬಂಗಾರದ ಪದಕಕ್ಕೆ ಪೈಪೋಟಿ ಇದೆ. ಇಬ್ಬರೂ ಜಿದ್ದಿನಿಂದ ಅಭ್ಯಾಸ ಮಾಡುತ್ತಿದ್ದಾರೆ. ಆದರೆ ಅಧ್ಯಯನದಲ್ಲಿ ಏನಾದರೂ ಹೊಸದು ಹೊಳೆದರೆ ತಕ್ಷಣ ಹಂಚಿಕೊಳ್ಳುವ ತೆರೆದ ಮನಸ್ಸು ಇಬ್ಬರದೂ. ತಮಗೆ ತಿಳಿದ ವಿಷಯವನ್ನು ಗುಟ್ಟಾಗಿ ಇಟ್ಟುಕೊಂಡು ಮೊದಲ ಸ್ಥಾನ ಪಡೆದುಕೊಳ್ಳಬೇಕೆಂಬ ಹಂಬಲ ಇಬ್ಬರಿಗೂ ಇಲ್ಲ. ಪರಸ್ಪರರ ಸಾಧನೆಯನ್ನು ತುಂಬು ಹೃದಯದಿಂದ ಅಭಿನಂದಿಸುತ್ತಿದ್ದರು. ಸುನೀತಾಳ ಭಾಷಣ ಎಂದರೆ ಸುಜಯನಿಗೆ ತುಂಬಾ ಇಷ್ಟ. ಹಾಗೆಯೇ ಸುಜಯ ಬರೆಯುವ ಲೇಖನಗಳು ಸುನೀತಾಳಿಗೆ ಬಹಳ ಪ್ರಿಯ.

ಇಷ್ಟಾದರೂ ಅವರು ತಮ್ಮ ತಮ್ಮ ಟಿಪ್ಪಣಿಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರೇ ಹೊರತು ಒಬ್ಬರ ಟಿಪ್ಪಣಿಯನ್ನು ಇನ್ನೊಬ್ಬರು ಓದುತ್ತಿರಲಿಲ್ಲ. ಆದರೆ ಇಂದು ಸುನೀತಾ ಸುಜಯನ ಟಿಪ್ಪಣಿಯನ್ನು ಕೇಳಿದ್ದು ಅದರಲ್ಲೂ ಫೋಟೋಕಾಪಿ ಮಾಡಿ ಓದುತ್ತೇನೆ ಎಂದಿದ್ದು ಸುಜಯನಿಗೆ ಕಸಿವಿಸಿಯನ್ನು ಉಂಟುಮಾಡಿತ್ತು. ಲಿಟರರಿ ಕ್ರಿಟಿಸಿಸಮ್ ಪೇಪರಿನ ದಿನ ಪರೀಕ್ಷಾ ಕೊಠಡಿಯಿಂದ ಹೊರಬಂದ ಸುನೀತಾ ’ಸುಜಯ, ನಿನ್ನ ನೋಟ್ಸ್ ತುಂಬಾ ಚೆನ್ನಾಗಿತ್ತು ಕಣೊ, ತುಂಬಾ ಥ್ಯಾಂಕ್ಸ್. ಬಾ ಒಂದು ಕಾಫಿ ಕುಡಿಸ್ತೇನೆ’ ಅಂತ ಹೇಳಿದಳು. ಸುಜಯ ಹೂಂ ಅಂತಷ್ಟೇ ಹೇಳಿ ಅವಳನ್ನು ಹಿಂಬಾಲಿಸಿದ. ಸುನೀತಾ ಎಂದಿನಂತೆ ಹರಟುತ್ತಲೇ ಇದ್ದಳು. ಸುಜಯ ಯಾಕೋ ಗಂಭೀರನಾಗಿ ಏನನ್ನೋ ಯೋಚಿಸುತ್ತಿರುವಂತೆ ಕಾಣುತ್ತಿದ್ದ. ಅದು ಅವನ ಸ್ವಭಾವವೇ ಆಗಿದ್ದರಿಂದ ಸುನೀತಾ ಹೆಚ್ಚೇನೂ ಕೆದಕಲಿಲ್ಲ.

ಫಲಿತಾಂಶ ಬಂತು. ಸುಜಯ ಕ್ಲಾಸಿಗೆ ಮೊದಲಿಗನಾಗಿ ನಾಲ್ಕು ಬಂಗಾರದ ಪದಕವನ್ನು ಪಡೆದುಕೊಂಡ. ಅದರಲ್ಲಿ ಲಿಟರರಿ ಕ್ರಿಟಿಸಿಸಮ್ ಪೇಪರಿಗೆ ಮೀಸಲಾಗಿದ್ದ ಪದಕವೂ ಒಂದು.

ಸುನೀತಾ ಬಂದು ಸುಜಯನನ್ನು ಅಭಿನಂದಿಸಿದಾಗ ಸುಜಯನ ಕಣ್ಣಿಂದ ನೀರು  ಸುರಿಯಲಾರಂಭಿಸಿತು. ಮುಖ ತಿರುಗಿಸಿಕೊಂಡ. ಸುನೀತಾ ಅವನ ಕೈ ಹಿಡಿದುಕೊಂಡು ’ಯಾಕೋ ಏನಾಯ್ತೋ? ಇಂತಹ ಸಂತೋಷದ ಸಂದರ್ಭದಲ್ಲಿ ಅಳುವುದು ಯಾಕೋ?’ ಅಂತ ಕೇಳಿದಳು. ಸುಜಯ ಬಿಕ್ಕುತ್ತಲೇ  ’ನೀನು ಯುದ್ಧಕ್ಕಿಂತ ಮೊದಲೇ ಯಾಕೆ ಶಸ್ತ್ರವನ್ನು ಕೆಳಗಿಟ್ಟು ಶರಣಾದೆ? ನನ್ನ ಇಂದಿನ ಯಶಸ್ಸಿಗೆ ನೀನು ಈವರೆಗೆ ನನಗೆ ಕೊಟ್ಟ ಸ್ಪರ್ಧೆಯೇ ಕಾರಣ. ಕಳೆದ ವರ್ಷ ನೀನು ನನಗಿಂತ ಹೆಚ್ಚು ಅಂಕ ಗಳಿಸಿದಾಗಲೂ ನನಗೆ ಬೇಜಾಗಿರಲಿಲ್ಲ. ಆದರೆ ಈ ವರ್ಷ ನೀನು ನನ್ನ ನೋಟ್ಸ್ ನ್ನು ಯಾಕೆ ಕೇಳಿದೆ? ಆಗಲೇ  ನೀನು ಸೋತೆ ಅನಿಸಿತ್ತು. ಆದರೆ ನನಗೆ ಅಂತಹ ಗೆಲುವು ಬೇಕಾಗಿರಲಿಲ್ಲ. ನನಗೆ ತುಂಬಾ ನೋವಾಯ್ತು. ಯಾಕೆ ಹಾಗೆ ಮಾಡಿದೆ?’

’ಅಯ್ಯೋ, ಇಷ್ಟೇನಾ? ಅದನ್ನೆಲ್ಲ ಆಮೇಲೆ ಹೇಳುತ್ತೇನೆ. ಬಾ ಈಗ ನೀನು ಬಂಗಾರದ ಪದಕವನ್ನು ಪಡೆದಿದ್ದಕ್ಕೆ ಕಾಫಿಯನ್ನಾದರೂ ಕುಡಿಸು ಮಹಾರಾಯ’ ಎನ್ನುತ್ತ ಎಳೆದುಕೊಂಡು ಹೋದಳು.

ಮಹಿಳೆಯರ ವೇದ ದರ್ಶನ

 ವೇದಗಳು ಅಪೌರುಷೇಯ ಎನ್ನುವ ನಂಬಿಕೆ ಆಸ್ತಿಕವರ್ಗದ್ದು. ಋಷಿಗಳು ವೇದಗಳನ್ನು ರಚಿಸಿಲ್ಲ. ಧ್ಯಾನಾವಸ್ಥೆಯಲ್ಲಿ ಕಂಡುಕೊಂಡಿದ್ದಾರೆ. ಸನಾತನ ಭಾರತದಲ್ಲಿ ಮಹಿಳೆಯರಿಗೆ ವೇದಾಧಿಕಾರ ಇರಲಿಲ್ಲ ಎಂಬ ಮಿಥ್ಯಾವಾದವೂ ಪ್ರಚಲಿತವಾಗಿದೆ. ಆದರೆ ಆಶ್ಚರ್ಯವೆಂಬಂತೆ ಅನೇಕ ವೇದಸೂಕ್ತಗಳ ದರ್ಶನವನ್ನು ಮಹಿಳೆಯರು ಮಾಡಿಕೊಂಡಿದ್ದಾರೆ. ಅವರನ್ನು ಆ ಮಂತ್ರಗಳ ಋಷಿಗಳೆಂದು ಗೌರವಿಸಲಾಗುತ್ತದೆ. 

ಬೃಹದ್ದೇವತಾ ಎಂಬ ಗ್ರಂಥದ ಎರಡನೆಯ ಅಧ್ಯಾಯದಲ್ಲಿ ವೇದಕಾಲದ ಋಷಿಕೆಯರ ಯಾದಿಯನ್ನು ಕೊಡಲಾಗಿದೆ.

ಘೋಷಾ ಗೋಧಾ ವಿಶ್ವವಾರಾ ಅಪಾಲೋಪನಿಷನ್ನಿಷತ್ |

ಬ್ರಹ್ಮಜಾಯಾ ಜುಹುರ್ನಾಮ ಅಗಸ್ತ್ಯಸ್ಯ ಸ್ವಸಾದಿತಿ ||

ಇಂದ್ರಾಣೀ ಚೇಂದ್ರಮಾತಾ ಚ ಸರಮಾ ರೋಮಶೋರ್ವಶೀ |

ಲೋಪಾಮುದ್ರಾ ಚ ನದ್ಯಶ್ಚ ಯಮೀ ನಾರೀ ಚ ಶಶ್ವತೀ ||

ಶ್ರೀರ್ಲಾಕ್ಷಾ ಸಾರ್ಪರಾಜ್ಞೀ ವಾಕ್ ಶ್ರದ್ಧಾ ಮೇಧಾ ಚ ದಕ್ಷಿಣಾ |

ರಾತ್ರೀ ಸೂರ್ಯಾ ಚ ಸಾವಿತ್ರೀ ಬ್ರಹ್ಮವಾದಿನ್ಯ ಈರಿತಾ: ||

ಈ ಲೇಖನದಲ್ಲಿ ಅಂತಹ ಕೆಲವು ಋಷಿಕೆಯರ ಹಾಗೂ ಅವರು ಕಂಡುಕೊಂಡ ವೇದಸೂಕ್ತಗಳ ಪರಿಚಯವನ್ನು ಮಾಡಿಕೊಳ್ಳೋಣ.

ಶಚೀ ಪೌಲೋಮಿ:

ಇವಳೊಬ್ಬಳು ಸ್ವಾಭಿಮಾನಿ ಋಷಿಕೆ. ಇವಳಿಂದ ಪ್ರಣೀತವಾದ ಶಚೀದೇವಿಯ ಕುರಿತಾದ ಋಗ್ವೇದ ಸೂಕ್ತದಲ್ಲಿ (೧೦ಮಂಡಲ,೧೫೯ಸೂಕ್ತ) ಅವಳ ಆತ್ಮಗೌರವ, ಜೀವನೋತ್ಸಾಹ, ಆತ್ಮವಿಶ್ವಾಸ, ತನ್ನ ಸಾಮರ್ಥ್ಯದ ಮೇಲೆ ಇರುವ ನಂಬಿಕೆಗಳು ತುಂಬಿ ತುಳುಕುತ್ತಿವೆ. ’ಅಹಂ ಕೇತುರಹಂ ಮೂರ್ಧಾ ಅಹಮುಗ್ರಾ ವಿವಾಚನೀ’ – ನಾನು ಮನೆಯ ಪತಾಕೆ, ನಾನು ಮನೆಯ ತಲೆ(ಮುಖ್ಯಸ್ಥೆ-ಬುದ್ಧಿವಂತೆ) ನಾನು ಅನ್ಯಾಯದ ವಿರುದ್ಧ ಉಗ್ರಳು. ನಾನು ವಿವೇಚನ ಶಕ್ತಿಯುಳ್ಳವಳು. ನನ್ನ ನಿರ್ಧಾರವನ್ನು ನನ್ನ ಪತಿ ಬೆಂಬಲಿಸುತ್ತಾನೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ. 

ಗಂಡು ಮಕ್ಕಳು ಒಳ್ಳೆಯವರೇ. ಅದರೆ ಹೆಣ್ಣುಮಕ್ಕಳೇನೂ ಕಡಿಮೆಯಲ್ಲ ಎಂದು ಅವಳು ಈ ಸೂಕ್ತದಲ್ಲಿ ಸ್ಪಷ್ಟವಾಗಿ ಹೇಳಿದ್ದಾಳೆ. ’ಮಮ ಪುತ್ರಾ: ಶತ್ರುಹಣೋಽಥೋ ಮಮ ದುಹಿತಾ ವಿರಾಟ್’ –’ನನ್ನ ಗಂಡು ಮಕ್ಕಳು ಶತ್ರು ಸಂಹಾರಕರು. ನನ್ನ ಹೆಣ್ಣು ಮಕ್ಕಳು ವಿರಾಟ್ ಸ್ವರೂಪದವರು. ನಾನು ಶತ್ರುವನ್ನು ಗೆದ್ದವಳು. ಹಾಗಾಗಿ ನನ್ನ ಪತಿಯೂ ನನ್ನನ್ನು ಗೌರವಿಸುತ್ತಾನೆ’ ಎಂದು ಅವಳು ಅಭಿಮಾನದಿಂದ ಹೇಳಿಕೊಳ್ಳುತ್ತಾಳೆ. ತ್ಯಾಗ, ಶಾಂತಿ, ಸಹನೆಗಳು ಹೆಣ್ಣಿನ ಹುಟ್ಟುಗುಣಗಳೇ ಆಗಿದ್ದರೂ ಅವು ದುರುಪಯೋಗಕ್ಕೆ ಒಳಗಾಗಬಾರದು ಎಂಬುದು ಅವಳ ಆಶಯ. ಹೆಣ್ಣು ಯಾವಾಗಲು ತಗ್ಗಿ ಬಗ್ಗಿಯೇ ನಡೆಯಬೇಕಿಲ್ಲ. ತಲೆ ಎತ್ತಿ ನಡೆಯಬಹುದು ಎಂದು ಅವಳು ಬಲವಾಗಿ ಪ್ರತಿಪಾದಿಸಿದ್ದಾಳೆ.

ಮಹಿಳೆಯರ ಸ್ವಾಭಿಮಾನವನ್ನು ಜಾಗ್ರತಗೊಳಿಸಿದ ಮೊದಲ ನಾರಿ ಎಂಬ ಬಿರುದನ್ನು ಶಚೀ ಪೌಲೋಮಿಗೆ ಕೊಡಬಹುದು. ವಿವಾಹ ಸಮಯದಲ್ಲಿ ಈ ಸೂಕ್ತವನ್ನು ವಧುವು ಪಠಿಸುವ ಪರಿಪಾಠವಿತ್ತು. ಇಂದಿಗೂ ವೈದಿಕ ಸಂಪ್ರದಾಯದ ಮದುವೆಯಲ್ಲಿ ಮದುವೆಗಿಂತ ಮುಂಚೆ ವಧುವಿನಿಂದ ಶಚೀಪೂಜೆಯನ್ನು ಮಾಡಿಸುತ್ತಾರೆ. ಆಗ ಇದೇ ಸೂಕ್ತದ ಪಠನೆಯಾಗುತ್ತದೆ. ಆ ವಧುವು ತನ್ನ ಗಂಡನ ಮನೆಯಲ್ಲಿ ಸ್ವಾಭಿಮಾನಿಯಾಗಿ ಬಾಳಲಿ ಎಂಬ ಉದ್ದೇಶ ಈ ಪೂಜೆಯ ಹಿಂದಿದೆ. ಪೂಜೆಯ ಸಮಯದಲ್ಲಿ ಇದನ್ನು ವಧುವಿಗೆ ತಿಳಿಸಿಕೊಟ್ಟರೆ ನಿಜಕ್ಕೂ ಅವಳ ಆತ್ಮವಿಶ್ವಾಸ ವರ್ಧಿಸೀತು.

ವಿಶ್ವವಾರಾ

ವೈದಿಕ ಸೂಕ್ತಗಳನ್ನು ರಚಿಸಿದ ಋಷಿಕೆಗಳಲ್ಲಿ ವಿಶ್ವವಾರಾ ಒಬ್ಬಳು. ಅತ್ರಿವಂಶಜಳಾದ ಇವಳು ರಚಿಸಿದ ಸೂಕ್ತ (ಋಗ್ವೆದದ ೫ನೇ ಮಂಡಲದ ೨೮ನೇ ಸೂಕ್ತ) ಅಗ್ನಿಯ ಕುರಿತಾದದ್ದು. ಪೂರ್ವದಿಕ್ಕಿಗೆ ಮುಖ ಮಾಡಿ ಕುಳಿತ ವಿಶ್ವವಾರಾ ತನ್ನ ವೈವಾಹಿಕ ಜೀವನ ಯಶಸ್ವಿಯೂ ಆನಂದಮಯವೂ ಆಗಿರಲೆಂದು ಪ್ರಾರ್ಥಿಸುತ್ತ ಅಗ್ನಿಯ ಉಪಾಸನೆಯನ್ನು ಮಾಡುತ್ತಾಳೆ. ಉಳಿದೆಲ್ಲ ದೇವತೆಗಳ ಪ್ರಾಪ್ತಿ ಅಗ್ನಿಯ ಮೂಲಕವೇ ಆಗುವುದರಿಂದ ಅಗ್ನಿಯ ಉಪಾಸನೆ ಮಹತ್ತ್ವಪೂರ್ಣವಾದದ್ದೆಂದು ಅವಳ ಪ್ರತಿಪಾದನೆ. ಅಂದಿನ ಕಾಲದಲ್ಲಿ ಸ್ತ್ರೀಯರು ಸ್ವತ: ಹೋಮ ಹವನಾದಿಗಳನ್ನು ನಡೆಸುತ್ತಿದ್ದರು ಎಂಬುದಕ್ಕೆ ಈ ಸೂಕ್ತವೊಂದು ಸಾಕ್ಷಿ.

ಅಪಾಲಾ

ವೇದದೃಷ್ಟಾರ ಋಷಿಕೆಗಳಲ್ಲಿ ಅಗ್ರಗಣ್ಯಳು ಅಪಾಲಾ. ಇವಳು ಕೂಡ ಅತ್ರಿ ವಂಶದವಳೇ. ಅತ್ಯಂತ ಕಷ್ಟಮಯ ಜೀವನ ಇವಳದಾಗಿತ್ತು. ಪೂರ್ವಸಂಚಿತಕರ್ಮದ ಫಲವೋ ಎಂಬಂತೆ ವಿವಾಹಾನಂತರ ಚರ್ಮವ್ಯಾಧಿಗೆ ಗುರಿಯಾದಳು. ಕೈಹಿಡಿದ ಪತಿ ಸಂಸಾರಸಾಗರದಲ್ಲಿ ಅರ್ಧದಲ್ಲೇ ಕೈಬಿಟ್ಟಾಗ ತವರುಮನೆಯನ್ನೇ ಆಶ್ರಯಿಸಬೇಕಾಯಿತು. ತಂದೆ ತುಂಬ ವಾತ್ಸಲ್ಯದಿಂದ ಸಲಹಿದರು. ಅವರ ಪ್ರೇರಣೆಯಿಂದ ಆತ್ಮಸ್ಥೈರ್ಯವನ್ನು ತಂದುಕೊಂಡು ಧೈರ್ಯವಾಗಿ ಜೀವನವನ್ನು ಎದುರಿಸಿದಳು. ತನ್ನ ಪ್ರೀತಿಯ ತಂದೆಯ ತಲೆ ಕೂದಲುಗಳನ್ನು ಕಳೆದುಕೊಂಡು ಬೋಳಾಗುವುದನ್ನು ನೋಡಿ ಬೇಸರಗೊಂಡು ವೇದಮಂತ್ರದ ಮೂಲಕ ಇಂದ್ರನನ್ನು ಸ್ತುತಿಸಿದಳು (ಋಗ್ವೇದ ೮ ನೇ ಮಂಡಲ ೯೧ನೇ ಸೂಕ್ತ). ಈ ಸೂಕ್ತದಲ್ಲಿ ಏಳು ಮಂತ್ರಗಳಿವೆ. ಇಂದ್ರನ ಅವಳ ಬೇಡಿಕೆಯನ್ನು ಈಡೇರಿಸಿದ್ದಲ್ಲದೆ, ಅವಳಿಗೆ ಆರೋಗ್ಯವನ್ನೂ ಕರುಣಿಸಿದ.

ಘೋಷಾ

ಆಂಗಿರಸ ಗೋತ್ರದ ದೀರ್ಘತಮ ಋಷಿಯ ಮೊಮ್ಮಗಳೂ ಕಕ್ಷಿವಾನ್ ಮುನಿಯ ಮಗಳೂ ಆದ ಘೋಷಾ ವೇದದೃಷ್ಟಾರ ಋಷಿಕೆಯರಲ್ಲಿ ಒಬ್ಬಳು. ಚಿಕ್ಕಂದಿನಲ್ಲೇ ಕುಷ್ಠರೋಗಕ್ಕೆ ಒಳಗಾಗಿ ಬ್ರಹ್ಮಚಾರಿಣಿಯಾಗಿಯೇ ಉಳಿಯಬೇಕಾಯಿತು. ಆದರೆ ಅದಕ್ಕೆ ಬೇಸರಿಸದೆ ವೇದಶಾಸ್ತ್ರಗಳ ಅಧ್ಯಯನದಲ್ಲಿ ತನ್ನನ್ನು ತೊಡಗಿಸಿಕೊಂಡಳು. ತನ್ನ ತಪಸ್ಸಿದ್ಧಿಯಿಂದ ದೇವವೈದ್ಯರಾದ ಅಶ್ವಿನೀದೇವತೆಗಳ ಮಂತ್ರವನ್ನು ಸಿದ್ಧಿಸಿಕೊಂಡು ಅವರನ್ನು ಸ್ತುತಿಸಿದಳು. ಹತ್ತನೆಯ ಮಂಡಲದ ೩೯ ಮತ್ತು ೪೦ನೆಯ ಸೂಕ್ತಗಳ ಋಷಿಕೆ ಇವಳು. ಮೊದಲ ಸೂಕ್ತದಲ್ಲಿ ಅಶ್ವಿನೀದೇವತೆಗಳನ್ನು ಪರಿಪರಿಯಾಗಿ ಸ್ತುತಿಸಿದ್ದಾಳೆ. ಎರಡನೆಯ ಸೂಕ್ತದಲ್ಲಿ ಅವಳಲ್ಲಿ ಸುಪ್ತವಾಗಿದ್ದ ವೈವಾಹಿಕ ಜೀವನದ ಕಾಮನೆಗಳು ವ್ಯಕ್ತವಾಗಿವೆ. ತನ್ನ ರೋಗವನ್ನು ಹೋಗಲಾಡಿಸಿ ಸುಂದರ ವೈವಾಹಿಕ ಜೀವನವನ್ನು ನಡೆಸಲು ಅನುವುಮಾಡಿಕೊಡುವಂತೆ ಅಶ್ವಿನೀ ದೇವತೆಗಳನ್ನು ಪ್ರಾರ್ಥಿಸಿದ್ದಾಳೆ. ಅಶ್ವಿನೀದೇವತೆಗಳು ಅವಳಿಗೆ ಮಧುವಿದ್ಯೆಯನ್ನು ಕಲಿಸಿ ಅವಳ ಅನಾರೋಗ್ಯ ದೂರವಾಗುವಂತೆಯೂ ಯೌವನ ಮರಳಿ ಬರುವಂತೆಯೂ ಅನುಗ್ರಹಿಸಿದರು. ನಂತರ ಅವಳು ಯೋಗ್ಯ ವರನನ್ನು ವರಿಸಿ ಸುಖಮಯ ಸಾಂಸಾರಿಕ ಜೀವನವನ್ನು ನಡೆಸಿದಳು.

ಕುಷ್ಠರೋಗಿಗಳನ್ನು ತಾತ್ಸಾರ ಮಾಡುವ ಮನೋಭಾವ ನಮ್ಮ ಸಮಾಜದಲ್ಲಿದೆ. ಅಪಾಲಾ ಹಾಗೂ ಘೋಷಾ ಇವರಿಗೆ ಅಂದು ವೈದಿಕಯುಗದಲ್ಲಿ ದೊರೆತ ಬೆಂಬಲ ಎಲ್ಲರಿಗೂ ದೊರೆಯಬೇಕು. ರೋಗಿಗಳೂ ಕೀಳರಿಮೆಯನ್ನು ಬಿಟ್ಟು ಆಶಾವಾದಿಗಳಾಗಿ ಮುಂದುವರಿಯಬೇಕು ಎಂಬ ಸಂದೇಶವನ್ನು ಘೋಷಾಳ ಜೀವನ ನೀಡುತ್ತದೆ.

ಶಾಶ್ವತಿ ಆಂಗೀರಸಿ: ಆಂಗೀರಸ ಗೋತ್ರದ ಋಷಿಕೆ ಇವಳು. ೮ನೆಯ ಮಂಡಲದ ೧ನೆಯ ಸೂಕ್ತದ ಕೊನೆಯ ಋಕ್ಕಿನ ಋಷಿಕೆ. ಇವಳ ಗಂಡನ ಪುರುಷತ್ವ ಯಾವುದೋ ಕಾರಣದಿಂದ ನಾಶವಾಗಿತ್ತು. ಇಂದ್ರನ ಪ್ರಾರ್ಥನೆಯಿಂದ ಅವನು ಅದನ್ನು ಮರಳಿ ಪಡೆದಾಗ ಶಾಶ್ವತಿ ಆನಂದ ಹೊಂದಿದಳು ಎಂಬ ವಿಚಾರ ಈ ಋಕ್ಕಿನಲ್ಲಿದೆ.

ಅದಿತಿ: ನಾಲ್ಕನೆಯ ಮಂಡಲದ ೧೮ ನೇ ಸೂಕ್ತದ ೭ನೇ ಋಕ್ಕಿನ ದೃಷ್ಟಾರಳು. ಇಲ್ಲಿ ’ನನ್ನ ಮಗನಾದ ಇಂದ್ರನು ವಜ್ರಾಯುಧದಿಂದ ವೃತ್ರಾಸುರನನ್ನು ಕೊಂದು ನದಿಗಳು ಸ್ವತಂತ್ರವಾಗಿ ಹರಿಯುವಂತೆ ಮಾಡಿದನು’ ಎಂದು ಹೇಳಿದ್ದಾಳೆ. ಪ್ರಾಯ: ಕಶ್ಯಪ ಋಷಿಯ ಹೆಂಡತಿ ಹಾಗೂ ದೇವತೆಗಳ ಅಥವಾ ಆದಿತ್ಯರ ತಾಯಿಯಾದ ಅದಿತಿಯೇ ಇವಳಿರಬೇಕು.

ಅದಿತಿ ದಾಕ್ಷಾಯಣಿ: ಹತ್ತನೆಯ ಮಂಡಲದ ೭೨ ನೆಯ ಸೂಕ್ತದ ಋಷಿಕೆ. ಈ ಸೂಕ್ತ ಸೃಷ್ಟಿಯ ಕ್ರಮವನ್ನು ವರ್ಣಿಸುತ್ತದೆ. ದಕ್ಷ ಪ್ರಜಾಪತಿಯಿಂದ ಅದಿತಿ ಹುಟ್ಟಿದಳೆಂದೂ ಅವಳಿಂದ ದೇವತೆಗಳೆಲ್ಲ ಹುಟ್ಟಿದರು ಎಂದು ವರ್ಣಿಸಲಾಗಿದೆ.

ಗೋಧಾ: ಹತ್ತನೆಯ ಮಂಡಲದ ೧೩೪ನೇ ಸೂಕ್ತದ ೬ ಮತ್ತು ೭ನೆಯ ಋಕ್ಕುಗಳು ಇವಳ ಹೆಸರಿನಲ್ಲಿದೆ. ಇದು ಇಂದ್ರನನ್ನು ಹೊಗಳುವ ಹಾಗೂ ಪ್ರಾರ್ಥಿಸುವ ಸೂಕ್ತ.

ಪ್ರಾಜಾಪತ್ಯಾ ದಕ್ಷಿಣಾ: ಹತ್ತನೆಯ ಮಂಡಲದ ೧೦೭ ನೇ ಸೂಕ್ತದ ಋಷಿಕೆ. ದಕ್ಷಿಣೆಯ ಮಹತ್ತ್ವವನ್ನು ವರ್ಣಿಸಿದ್ದಾಳೆ.

ವಾಗಾಂಭ್ರಣೀ: ಅಂಭ್ರಣ ಋಷಿಯ ಕುವರಿ ವಾಕ್ ಹತ್ತನೆಯ ಮಂಡಲದ ೧೨೫ ನೇ ಸೂಕ್ತದ ಋಷಿಕೆ. ಅತ್ಯುನ್ನತ ಅದ್ವೈತತತ್ತ್ವವನ್ನು ಸಾಧಿಸಿದ್ದ ಈ ಬ್ರಹ್ಮವಾದಿನಿ ಸಚ್ಚಿತ್ಸುಖಾತ್ಮಕವಾದ ಪರಮಾತ್ಮನೊಂದಿಗೆ ತಾದಾತ್ಮ್ಯವನ್ನನುಭವಿಸುತ್ತ ತನ್ನನ್ನೇ ತಾನು ಸ್ತುತಿಸಿಕೊಳ್ಳುತ್ತಾಳೆ. ತಾನೇ ಮರುತ್, ಮಿತ್ರ, ರುದ್ರ ಎಂದೆಲ್ಲ ವರ್ಣಿಸುತ್ತ ಆತ್ಮ ಸರ್ವವನ್ನೂ ವ್ಯಾಪಿಸಿದೆ ಎಂಬ ಅದ್ವೈತ ತತ್ತ್ವವನ್ನು ಸಾರುತ್ತಾಳೆ.

ಶ್ರದ್ಧಾ ಕಾಮಾಯನೀ: ಋಗ್ವೇದದ ಹತ್ತನೆಯ ಮಂಡಲದ ೧೫೧ ನೇ ಸೂಕ್ತದ ದೇವತೆ ಶ್ರದ್ಧಾ. ಐದು ಮಂತ್ರಗಳ ಈ ಸೂಕ್ತದ ಋಷಿಕೆ ಶ್ರದ್ಧಾ ಕಾಮಾಯನೀ. ಜ್ಞಾನ ಸಂಪಾದನೆಯಲ್ಲಿ, ದಾನದಲ್ಲಿ, ಕೆಲಸದಲ್ಲಿ ಹೀಗೆ ಜೀವನದ ಪ್ರತಿಯೊಂದು ಕ್ಷಣದಲ್ಲೂ ಶ್ರದ್ಧೆ ಬೇಕು ಎಂಬುದನ್ನು ಭಗವದ್ಗೀತಾದಿಯಾಗಿ ಅನೇಕ ಗ್ರಂಥಗಳು ಹೇಳಿವೆ. ಈ ಸೂಕ್ತದಲ್ಲಿ ಋಷಿಕೆಯು ಅದನ್ನೇ ಹೇಳುತ್ತಾಳೆ. ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಹೀಗೆ ಎಲ್ಲ ಕಾಲದಲ್ಲಿಯೂ ಶ್ರದ್ಧಾದೇವಿಯ ಅನುಗ್ರಹವಾಗಲಿ ಎಂದು ಬೇಡಿಕೊಳ್ಳುತ್ತಾಳೆ.

ಸರ್ಪರಾಜ್ಞೀ: ಋಗ್ವೇದದ ಹತ್ತನೆಯ ಮಂಡಲದ ೧೮೯ ನೇ ಸೂಕ್ತದ ಋಷಿಕೆ ಸರ್ಪರಾಜ್ಞೀ. ಸೂರ್ಯದೇವತಾಪರಕವಾದ ಈ ಸೂಕ್ತದಲ್ಲಿ ಗಾಯತ್ರಿ ಛಂದಸ್ಸಿನ ಮೂರು ಋಕ್ಕುಗಳು ಮಾತ್ರ ಇವೆ. ಈ ಸೂಕ್ತ ಇತರ ವೇದಗಳಲ್ಲಿಯೂ ಕಾಣಸಿಗುತ್ತದೆ.

ಸುದಿತಿ: ಎಂಟನೆಯ ಮಂಡಲದ ೭೧ನೆಯ ಸೂಕ್ತ. ಆಂಗಿರಸ, ಪುರುಮೀಳ ಋಷಿಗಳೊಂದಿಗೆ ಸುದಿತಿಯು ಕೂಡ ಈ ಸೂಕ್ತದ ಋಷಿಪಟ್ಟವನ್ನಲಂಕರಿಸಿದ್ದಾಳೆ. ೧೫ ಮಂತ್ರಗಳ ಈ ಸೂಕ್ತ ಅಗ್ನಿಪರಕವಾಗಿದೆ.

ಸಿಕತಾ ನಿವಾವರಿ: ಒಂಭತ್ತನೆಯ ಮಂಡಲದ ೮೬ನೇ ಸೂಕ್ತದ ೧೧ ರಿಂದ ೨೦ನೆಯ ಮಂತ್ರಗಳ ಋಷಿಕೆ ಇವಳು. ಪವಮಾನ ಸೋಮ ಈ ಸೂಕ್ತದ ದೇವತೆ.

ರೋಮಶಾ: ಬೃಹಸ್ಪತಿಯ ಮಗಳು ಹಾಗೂ ಭಾವಭವ್ಯನ ಪತ್ನಿ. ವಿದುಷಿಯಾಗಿದ್ದಳು. ಇವಳ ಮೈಯೆಲ್ಲ ರೋಮದಿಂದ ಕೂಡಿದ್ದರಿಂದ ಪತಿಗೆ ಇವಳು ಇಷ್ಟವಾಗುತ್ತಿರಲಿಲ್ಲ. ಇವಳು ಮಹಿಳೆಯರ ವಿದ್ಯಾಭ್ಯಾಸದ ಬಗ್ಗೆ, ಸ್ವಾಭಿಮಾನದಿಂದ ಕೂಡಿದ ಜೀವದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಿದಳು. ಋಗ್ವೇದದ ಪ್ರಥಮಮಂಡಲದ ೧೨೬ ನೇ ಸೂಕ್ತದ ಕೊನೆಯ ಮಂತ್ರದ ಋಷಿಕೆ ಇವಳು. ಸಾಮವೇದದ ಅನೇಕ ಸೂಕ್ತಗಳು ಇವಳ ಹೆಸರಿನಲ್ಲಿವೆ. 

ಉರ್ವಶಿ: ಋಗ್ವೇದದಲ್ಲಿರುವ ಅನೇಕ ಸಂವಾದ ಸೂಕ್ತಗಳಲ್ಲಿ ಹತ್ತನೆಯ ಮಂಡಲದ ೯೫ ನೇ ಸೂಕ್ತವೂ ಒಂದು. ಇದರಲ್ಲಿ ಅಪ್ಸರೆ ಉರ್ವಶೀ ಹಾಗೂ ಚಂದ್ರವಂಶದ ರಾಜ ಪುರೂರವನ ಸಂವಾದವಿದೆ. 

ವಸುಕ್ರಪತ್ನಿ: ಇಂದ್ರನ ಮಗನಾದ ವಸುಕ್ರ ಎನ್ನುವವನ ಪತ್ನಿ ಇವಳು. ಹತ್ತನೆಯ ಮಂಡಲದ ಇಪ್ಪತ್ತೆಂಟನೆಯ ಸೂಕ್ತದ ಋಷಿಕೆ. ಹನ್ನೆರಡು ಮಂತ್ರಗಳನ್ನು ಹೊಂದಿರುವ ಈ ಸೂಕ್ತದಲ್ಲಿ ಇಂದ್ರನ ಹಾಗೂ ವಸುಕ್ರನ ಸ್ತುತಿಯಿದೆ.

ಇಂದ್ರಾಣಿ: ಹತ್ತನೆಯ ಮಂಡಲದ ೮೬ ನೇ ಸೂಕ್ತದ ಋಷಿಕೆ. ಇಂದ್ರಪರಕವಾದ ಈ ಸೂಕ್ತದಲ್ಲಿ ಹತ್ತು ಮಂತ್ರಗಳು ಇಂದ್ರಾಣಿಯವು.

ವೈವಸ್ವತೀ ಯಮೀ: ಸೂರ್ಯ ಮತ್ತು ಸರಣ್ಯೂ ದೇವಿಯರ ಮಕ್ಕಳು ಯಮ ಮತ್ತು ಯಮೀ. ಋಗ್ವೇದದ ೧೦ ನೆಯ ಮಂಡಲದ ಹತ್ತನೆಯ ಸೂಕ್ತ ಇವರ ಸಂವಾದವನ್ನು ಹೊಂದಿದೆ. ಹತ್ತನೆಯ ಮಂಡಲದ ೧೫೪ ನೇ ಸೂಕ್ತದ ಋಷಿಕೆಯೂ ಈ ಯಮೀ.

ರಾತ್ರಿ: ಹತ್ತನೆಯ ಮಂಡಲದ ೧೨೭ ನೇ ಸೂಕ್ತ ೮ ಮಂತ್ರಗಳನ್ನು ಹೊಂದಿದ್ದು ರಾತ್ರಿಸೂಕ್ತವೆಂದು ಪ್ರಸಿದ್ಧವಾಗಿದೆ. ಇದರ ಋಷಿಕೆಯ ಹೆಸರೂ ರಾತ್ರಿ. ಅವಳು ಭರದ್ವಾಜ ಮುನಿಯ ಮಗಳಾಗಿದ್ದಳು.

ಇಂದ್ರಮಾತಾ: ಹತ್ತನೆಯ ಮಂಡಲದ ೧೫೩ ನೇ ಸೂಕ್ತದ ಋಷಿಕೆ. ಕೇವಲ ಐದು ಮಂತ್ರಗಳಿರುವ ಸೂಕ್ತ ಇಂದ್ರಪರಕವಾಗಿದೆ.

ಶಿಖಂಡಿನೀ: ಕಶ್ಯಪಮುನಿಯ ಕುವರಿಯರಾದ ಶಿಖಂಡಿನಿಯರು ಒಂಭತ್ತನೆಯ ಮಂಡಲದ ೧೦೪ನೇ ಸೂಕ್ತದ ದ್ರಷ್ಟಾರರು. ಈ ಸೂಕ್ತ ಪವಮಾನ ಸೋಮನ ಪರಕವಾಗಿದೆ.

ಸೂರ್ಯಾ ಸಾವಿತ್ರೀ : ಸೂರ್ಯನ ಮಗಳು ಹಾಗೂ ಪ್ರಜಾಪತಿಯಿಂದ ಪಾಲಿತಳಾದವಳು. ಋಗ್ವೇದದ ಹತ್ತನೆಯ ಮಂಡಲದ ೮೫ ನೆಯ ಸೂಕ್ತದಲ್ಲಿ ಇವಳ ವಿವಾಹದ ವರ್ಣನೆಯಿದೆ. ವಿವಾಹ ಸಮಯದಲ್ಲಿ ಸೋಮನು ಇವಳಿಗೆ ಮೂರೂ ವೇದಗಳನ್ನು ಕೊಟ್ಟನು. ವಿವಾಹದಲ್ಲಿ ಬಳಸುವ ಪ್ರಸಿದ್ಧ ಮಂತ್ರಗಳು ಈ ಸೂಕ್ತದಲ್ಲಿವೆ. ಪಾಣಿಗ್ರಹಣ ಕಾಲದಲ್ಲಿ ವರನು ಹೇಳುವ ’ಗೃಭ್ಣಾಮಿ ತೇ ಸೌಭಗತ್ವಾಯ ಹಸ್ತಂ’ ಎಂಬ ಮಂತ್ರ ಇದೇ ಸೂಕ್ತದ್ದು. ವಧುವು ಸುಮಂಗಲಿಯಾಗಿದ್ದಾಳೆ. ಇವಳಿಗೆ ಸೌಭಾಗ್ಯವನ್ನು ನೀಡಿ ಎಂದು ಪ್ರಾರ್ಥಿಸುವ ’ಸುಮಂಗಲೀರಿಯಂ ವಧೂ: ಸಮೇತ ಪಶ್ಯತ’ ಎಂಬ ಮಂತ್ರವೂ ಇದೆ. ಕೊನೆಯ ಮಂತ್ರ ’ಸಮ್ರಾಜ್ಞೀ ಶ್ವಶುರೇ ಭವ, ಸಮ್ರಾಜ್ಞೀ ಶ್ವಶ್ರ್ವಾಂ ಭವ’ ಎಂಬ ಮಂತ್ರದ್ತಲ್ಲಂತೂ ಗಂಡನ ಮನೆಯಲ್ಲಿ ವಧುವು ಮಾವ, ಅತ್ತೆ ಮೈದುನರು ಹಾಗೂ ನಾದಿನಿಯರ ಮನವನ್ನು ಗೆದ್ದು ಸಾಮ್ರಾಜ್ಞಿಯಾಗಿ ಮೆರೆಯಲಿ ಎಂಬ ಉನ್ನತ ಆಶಯ ವ್ಯಕ್ತವಾಗಿದೆ.

ಉಪಸಂಹಾರ:

ಸನಾತನ ಭಾರತದಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರಿಗೆ ಪ್ರಾಶಸ್ತ್ಯವಿತ್ತು. ಅವರನ್ನು ಅತ್ಯಂತ ಗೌರವದಿಂದ ನಡೆಸಿಕೊಳ್ಳಲಾಗುತ್ತಿತ್ತು ಹಾಗೂ ಅವರು ಸ್ವತಂತ್ರವಾಗಿ ಸ್ವಾಭಿಮಾನದ ಜೀವನವನ್ನು ನಡೆಸುತ್ತಿದ್ದರು ಎಂಬುದಕ್ಕೆ ಮಹಿಳೆಯರು ಋಷಿಕೆಯಾಗಿರುವ ವೇದಮಂತ್ರಗಳು ಹಾಗೂ ಅವುಗಳಲ್ಲಿ ವ್ಯಕ್ತವಾಗಿರುವ ವಿಚಾರಗಳೇ ಸಾಕ್ಷಿ. ಇಂದಿಗೂ ನಾವು ಮಹಿಳೆಯರಿಗೆ ಅದೇ ಗೌರವವನ್ನು ಕೊಟ್ಟು ಸನಾತನ ಭಾರತವನ್ನು ಬಲಪಡಿಸೋಣ.


ನಮ್ಮನೆ ಮೇಷ್ಟ್ರು

 ರಾತ್ರಿ ಮಲಗುವುದು ಎಷ್ಟೊತ್ತಾದರೂ ನನ್ನವಳು ಬೆಳಿಗ್ಗೆ 5 ಗಂಟೆಗೇ ಏಳುವುದು. ಸವಿನಿದ್ದೆಯಲ್ಲಿರುವ ನನಗೆ ಎಚ್ಚರವಾಗಬಾರದೆಂದು ನನ್ನ ಪಾದವನ್ನು ಸ್ಪರ್ಶಿಸದೆ ಸ್ವಲ್ಪ ದೂರದಿಂದಲೇ ನಮಸ್ಕಾರ ಮಾಡಿ ಹೋಗುತ್ತಾಳಂತೆ. ನಾನು ಅದನ್ನು ನೋಡಿಲ್ಲವಾದರೂ ನಂಬಿದ್ದೇನೆ. ಅವಳು ಹಲ್ಲುಜ್ಜುವ ಸದ್ದಾಗಲಿ, ಮುಖ ತೊಳೆಯಲು ತಿರುಗಿಸಿದ ನಲ್ಲಿಯ ನೀರಿನ ಸದ್ದಾಗಲೀ ನನ್ನ ನಿದ್ರಾಭಂಗವನ್ನು ಮಾಡಿಲ್ಲ. ಆದರೂ ಅವೆಲ್ಲವನ್ನೂ ಅವಳು ಮಾಡುತ್ತಾಳೆ ಎಂದು ಬಲವಾಗಿ ನಂಬಿದ್ದೇನೆ. 

ಹಿಂದಿನ ರಾತ್ರಿ ನನ್ನಿಂದ ತೊಳೆಸಿದ ಪಾತ್ರೆಗಳನ್ನು ಜೋಡಿಸುವಾಗ ಅಪ್ಪಿ ತಪ್ಪಿ ಕೈಜಾರಿದ ಪಾತ್ರೆಯ ಸದ್ದು ನನ್ನ ನಿದ್ರಾಭಂಗವನ್ನು ಮಾಡಿದ್ದಿದೆ. ಆಗೆಲ್ಲ ಅವಳಿಂದ ತಪ್ಪುಗಾಣಿಕೆಯನ್ನು ಪಡೆದಿದ್ದೇನೆ.

6 ಹೊಡೆಯಿತು ಅಂತಾದರೆ ಎಲ್ಲರನ್ನೂ ಎಬ್ಬಿಸುವ ಪ್ರಯತ್ನ ಶುರು ಅದು ಅವಳ ಬೆಳಗಿನ ತಿಂಡಿಯ ತಯಾರಿಯ ಜೊತೆ ಜೊತೆಗೇ ಅರ್ಧಗಂಟೆಯವರೆಗೆ ನಡೆಯುತ್ತಾ ಇರುತ್ತದೆ. ಮೊದಲು ನನ್ನನ್ನು ಎಬ್ಬಿಸುವ ಕರ್ಮ. ಮೊದಲ ಕರೆಗೆ 'ಇನ್ನೈದು ನಿಮಿಷ ಕಣೆ' ಎನ್ನುವುದು, ಎರಡನೇ ಕರೆಗೆ 'ಗೀಸರ್ ಸ್ವಿಚ್ ಹಾಕಿದೆಯಾ' ಎಂದು ಕೇಳುವುದು, ಮೂರನೇ ಕರೆಗೆ ಮನಸ್ಸಿಲ್ಲದ ಮನಸ್ಸಿನಿಂದ ಏಳುವುದು ನನ್ನ ದಿನಚರಿಯ ಆರಂಭ. ಕೆಲವೊಮ್ಮೆ ಅಂತೂ ಅವಳು ಬಿಸಿ ಸೌಟನ್ನು ಹಿಡಿದು ಮಲಗುವ ಕೋಣೆಯನ್ನು ಪ್ರವೇಶಿಸಿದಾಗಲೇ ಏಳುವುದು. ಹೆಂಡತಿಗೆ ಹೆದರದಿದ್ದರೂ ಸೌಟಿಗಾದರೂ ಗೌರವ ಕೊಡಬೇಕಲ್ಲ!

ಪ್ರೊಫೆಸರ್ ಆಗಿರುವ ನಾನು ಮರೆಗುಳಿ ಆಗಿರುವುದು ಸಹಜ ತಾನೇ? ಹಾಗಾಗಿ ಪ್ರತಿದಿನ ಟೊವೆಲ್ ಮರೆತೇ ಬಚ್ಚಲಿಗೆ ಹೋಗುವುದು ನಾನು. ಟೊವೆಲ್ ಕೊಡಲು ಒಲೆಯ ಮೇಲಿಟ್ಟ ಒಗ್ಗರಣೆಯನ್ನು ಬಿಟ್ಟು ಬಂದ ಅವಳ ಮುಖವನ್ನು ನೋಡಿದಾಗ ಅವಳಿಂದ ಬೆನ್ನುಜ್ಜಿಸಿಕೊಳ್ಳುವ ಆಸೆಯನ್ನು ಹೇಳುವ ಧೈರ್ಯವಾದರೂ ಹೇಗೆ ಬಂದೀತು?

ನಮ್ಮ ದೇವರು ಕುಳಿತಿರುವುದು ಅಡುಗೆ ಮನೆಯಲ್ಲೇ. ಹಾಗಾಗಿ ಮಾಡಿದ ಅಡುಗೆಯೆಲ್ಲಾ ಅವನ ಪ್ರಸಾದವೇ ಎಂದು ತಿಳಿದು ಪ್ರತ್ಯೇಕ ನೈವೇದ್ಯ ಮಾಡುವುದೇ ಇಲ್ಲ. ವಿಷಯ ಅದಲ್ಲ. ನಾನು ಪೂಜೆಗೆ ಕುಳಿತರೂ ಮಂತ್ರ ಹೇಳುವವಳು ಅವಳು. 'ಎದ್ರೆನೊ? ಟೈಮಾಯಿತು, ಎದ್ದೇಳಿ, ಹಲ್ಲುಜ್ಜಿ ಸ್ನಾನ ಮಾಡಿ. ಸ್ಕೂಲ್ ಬಸ್ ತಪ್ಪಿದರೆ ನನಗೇ ಕಷ್ಟ' ಎಂದು ಇಬ್ಬರು ಮಕ್ಕಳನ್ನು ಎಬ್ಬಿಸಲು ಐದಾರು ಸಲವಾದರೂ ಪ್ರತಿದಿನ  ಈ ಮಂತ್ರವನ್ನು ಪಠಿಸುತ್ತಾಳೆ. ಅಂತೂ ಅವರನ್ನು ಎಬ್ಬಿಸಿ ಸ್ನಾನ ಮಾಡಿಸಿ, ಸಮವಸ್ತ್ರ ತೊಡಿಸಿ, ಟಿಫಿನ್ ಬಾಕ್ಸ್, ನೀರಿನ ಬಾಟಲಿ ತುಂಬಿ ಅವರ ಬ್ಯಾಗಿಗೆ ಹಾಕಿ ಬಸ್ ಹತ್ತಿಸಿದರೆ ಒಂದು ಹಂತ ಮುಗೀತು.

ಮಕ್ಕಳಿಗೆ ತಮ್ಮಂತೆ ಅಪ್ಪಾಜಿಯೂ ಸ್ಕೂಲಿಗೆ ಹೋಗುತ್ತಾರೆ ಎಂದು ಖುಷಿ. ಅಪ್ಪಾಜಿ ಮೇಷ್ಟ್ರು ಕಣ್ರೋ ಅಂದ್ರೆ ಅವರಿಗೆ ನಂಬಿಕೆಯೇ ಬರಲ್ಲ. 'ನಾನು ಸ್ಕೂಲಿನಲ್ಲಿ ಮಾತ್ರ ಮೇಷ್ಟ್ರು ಕಣ್ರೋ, ಮನೆಯಲ್ಲಿ ನಮಗೆಲ್ಲರಿಗೂ ನಿಮ್ಮಮ್ಮನೇ ಮೇಷ್ಟ್ರು' ಎನ್ನುವ ನನ್ನ ಕಡೆಗೆ ವೇಗವಾಗಿ ಬರುವ ಅವಳ ದೃಷ್ಟಿಯ ಬಾಣದಿಂದ ಪಾರಾಗುವ ಉಪಾಯ ಹುಡುಕುತ್ತೇನೆ. 

ನನಗೆ ತಿಂಡಿ, ಚಹಾ ಕೊಟ್ಟು, ಟಿಫಿನ್ ಬಾಕ್ಸ್, ನೀರಿನ ಬಾಟಲಿ ಹಾಕಿ, ಶರ್ಟ್ ಪ್ಯಾಂಟ್ ಗಳನ್ನು ಸರಿಯಾಗಿ ಹಾಕಿಕೊಂಡಿದ್ದೇನೆಯೇ ಎಂದು ಚೆಕ್ ಮಾಡಿ, ಎಲ್ಲೋ ಇಟ್ಟುಕೊಂಡಿರುವ ನನ್ನ ಮೊಬೈಲ್, ಬೈಕ್ ಕೀಗಳನ್ನು ಹುಡುಕಿ ತಂದು ನನ್ನ ಕೈಯಲ್ಲಿ ಹಿಡಿಸಿ, ಕರವಸ್ತ್ರವನ್ನು ಜೇಬಿಗೆ ತುರುಕಿ 'ಲೇಟಾಯಿತು, ಸಾವಕಾಶವಾಗಿ ಹೋಗಿ' ಎನ್ನುವ ಪರಸ್ಪರ ವಿರುದ್ಧವಾದ ಮಾತುಗಳನ್ನು ಆಡಿ ನನ್ನನ್ನು ಕಳಿಸಿಕೊಡುತ್ತಾಳೆ. ಮಕ್ಕಳನ್ನು ಶಾಲೆಗೆ ಕಳಿಸುವಾಗ ಅವರ ಹಣೆಗೆ ಸಿಗುವ ಭಾಗ್ಯ ನನ್ನ ಕೆನ್ನೆಗೆ ಸಿಗಬಹುದೇನೋ ಎಂದು ಕಾಯುತ್ತೇನೆ. ಸಿಹಿಯೋ ಕಹಿಯೋ ಎಡ ಕೆನ್ನೆಗೆ ದೊರೆತುದುದು ಬಲ ಕೆನ್ನೆಗೂ ಸಿಗಲಿ ಎಂದು ಬಯಸುತ್ತೇನೆ. ನಾನು ಹೊಸ್ತಿಲು ದಾಟುವಾಗ ಅವಳ ಉಸ್ಸಪ್ಪ ಎಂದು ಸೋಫಾದ ಮೇಲೆ ಕುಳಿತಿದ್ದು ಕಂಡರೂ ಕಾಣದವನಂತೆ ನಾನು ಬೈಕ್ ಚಾಲು ಮಾಡುತ್ತೇನೆ.

ಕೊನೆಯ ಗುಟುಕು: ಇದನ್ನು ಓದಿ ನನ್ನವಳು ಒಬ್ಬಳು ಆದರ್ಶ ಪತ್ನಿ, ನಾನೊಬ್ಬ ಮಾಮೂಲಿ ಗಂಡ ಅಂತೇನೂ ನೀವು ಅಂದುಕೋ ಬೇಕಾಗಿಲ್ಲ. ದಿನವಿಡೀ ಮಾಡಿದ ಶ್ರಮದ ಪರಿಹಾರಕ್ಕೆ ರಾತ್ರಿ ಬಹಳ ಹೊತ್ತು ನನ್ನಿಂದ ಕಾಲನ್ನು ಒತ್ತಿಸಿಕೊಳ್ಳುತ್ತಾಳೆ!!

ಸ್ನೇಹ-ಸ್ಪರ್ಧೆ

  ’ನಿನ್ನ ಲಿಟರರಿ ಕ್ರಿಟಿಸಿಸಮ್ ನೋಟ್ಸ್ ಕೊಡ್ತಿಯಾ? ಝೆರೊಕ್ಸ್ ಮಾಡಿಸಿಕೊಳ್ಳುತ್ತೇನೆ’ ಸಹಾಧ್ಯಾಯಿನಿ ಸುನೀತಾ ಹೀಗೆ ಕೇಳಿದಾಗ ಸುಜಯನಿಗೆ ಆಶ್ಚರ್ಯ. ಅವರಿಬ್ಬರೂ ಮಾನಸ ಗ...