Thursday, March 9, 2017

ಘೋಷಾ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
“ಸನಾತನ ಭಾರತದ ಸ್ತ್ರೀರತ್ನಗಳು”
ಭಾಗ – ೧೦

ಘೋಷಾ

ಆಂಗಿರಸ ಗೋತ್ರದ ದೀರ್ಘತಮ ಋಷಿಯ ಮೊಮ್ಮಗಳೂ ಕಕ್ಷಿವಾನ್ ಮುನಿಯ ಮಗಳೂ ಆದ ಘೋಷಾ ವೇದದೃಷ್ಟಾರ ಋಷಿಕೆಯರಲ್ಲಿ ಒಬ್ಬಳು. ಚಿಕ್ಕಂದಿನಲ್ಲೇ ಕುಷ್ಠರೋಗಕ್ಕೆ ಒಳಗಾಗಿ ಬ್ರಹ್ಮಚಾರಿಣಿಯಾಗಿಯೇ ಉಳಿಯಬೇಕಾಯಿತು. ಆದರೆ ಅದಕ್ಕೆ ಬೇಸರಿಸದೆ ವೇದಶಾಸ್ತ್ರಗಳ ಅಧ್ಯಯನದಲ್ಲಿ ತನ್ನನ್ನು ತೊಡಗಿಸಿಕೊಂಡಳು. ತನ್ನ ತಪಸ್ಸಿದ್ಧಿಯಿಂದ ದೇವವೈದ್ಯರಾದ ಅಶ್ವಿನೀದೇವತೆಗಳ ಮಂತ್ರವನ್ನು ಸಿದ್ಧಿಸಿಕೊಂಡು ಅವರನ್ನು ಸ್ತುತಿಸಿದಳು. ಹತ್ತನೆಯ ಮಂಡಲದ ೩೯ ಮತ್ತು ೪೦ನೆಯ ಸೂಕ್ತಗಳ ಋಷಿಕೆ ಇವಳು. ಮೊದಲ ಸೂಕ್ತದಲ್ಲಿ ಅಶ್ವಿನೀದೇವತೆಗಳನ್ನು ಪರಿಪರಿಯಾಗಿ ಸ್ತುತಿಸಿದ್ದಾಳೆ. ಎರಡನೆಯ ಸೂಕ್ತದಲ್ಲಿ ಅವಳಲ್ಲಿ ಸುಪ್ತವಾಗಿದ್ದ ವೈವಾಹಿಕ ಜೀವನದ ಕಾಮನೆಗಳು ವ್ಯಕ್ತವಾಗಿವೆ. ತನ್ನ ರೋಗವನ್ನು ಹೋಗಲಾಡಿಸಿ ಸುಂದರ ವೈವಾಹಿಕ ಜೀವನವನ್ನು ನಡೆಸಲು ಅನುವುಮಾಡಿಕೊಡುವಂತೆ ಅಶ್ವಿನೀ ದೇವತೆಗಳನ್ನು ಪ್ರಾರ್ಥಿಸಿದ್ದಾಳೆ. ಅಶ್ವಿನೀದೇವತೆಗಳು ಅವಳಿಗೆ ಮಧುವಿದ್ಯೆಯನ್ನು ಕಲಿಸಿ ಅವಳ ಅನಾರೋಗ್ಯ ದೂರವಾಗುವಂತೆಯೂ ಯೌವನ ಮರಳಿ ಬರುವಂತೆಯೂ ಅನುಗ್ರಹಿಸಿದರು. ನಂತರ ಅವಳು ಯೋಗ್ಯ ವರನನ್ನು ವರಿಸಿ ಸುಖಮಯ ಸಾಂಸಾರಿಕ ಜೀವನವನ್ನು ನಡೆಸಿದಳು.

ಕುಷ್ಠರೋಗಿಗಳನ್ನು ತಾತ್ಸಾರ ಮಾಡುವ ಮನೋಭಾವ ನಮ್ಮ ಸಮಾಜದಲ್ಲಿದೆ. ಅಪಾಲಾ ಹಾಗೂ ಘೋಷಾ ಇವರಿಗೆ ಅಂದು ವೈದಿಕಯುಗದಲ್ಲಿ ದೊರೆತ ಬೆಂಬಲ ಎಲ್ಲರಿಗೂ ದೊರೆಯಬೇಕು. ರೋಗಿಗಳೂ ಕೀಳರಿಮೆಯನ್ನು ಬಿಟ್ಟು ಆಶಾವಾದಿಗಳಾಗಿ ಮುಂದುವರಿಯಬೇಕು ಎಂಬ ಸಂದೇಶವನ್ನು ಘೋಷಾಳ ಜೀವನ ನೀಡುತ್ತದೆ.


ಮಹಾಬಲ ಭಟ್, ಗೋವಾ

No comments:

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...