Monday, March 17, 2014

ಆನಂದವಾತ್ಮಗುಣ

ಮೌನದೊಳೊ ಮಾತಿನೊಳೊ ಹಾಸ್ಯದೊಳೊ ಹಾಡಿನೊಳೊ|
ಮಾನವಂ ಪ್ರಣಯದೊಳೊ ವೀರವಿಜಯದೊಳೊ
ಏನೋ ಎಂತೋ ಸಮಾಧಾನಗಳನರಸುತಿಹ|
ನಾನಂದವಾತ್ಮಗುಣ-ಮಂಕುತಿಮ್ಮ||

ಪ್ರತಿಯೊಬ್ಬ ಜೀವಿಯ ಪರಮೋದ್ದೇಶ ಜೀವನವನ್ನು ಆನಂದವಾಗಿ ಕಳೆಯುವುದು ಹಾಗೂ ಕೊನೆಯಲ್ಲಿ ಆತ್ಯಂತಿಕವಾದ ಆನಂದವನ್ನು ಪಡೆಯುವುದು. ನಾವು ಮಾಡುತ್ತಿರುವ ಡೊಂಬರಾಟಳೆಲ್ಲ ಈ ಆನಂದವನ್ನು ಪಡೆಯುವುದಕ್ಕೆ. ಹಾಗಾದರೆ ಈ ಆನಂದದ ಸ್ವರೂಪವೇನು? ಅದರ ರಹಸ್ಯವೇನು ಅದನ್ನು ಪಡೆಯುವ ಬಗೆಯೆಂತು?
ಆನಂದಂ ಬ್ರಹ್ಮೇತಿ ವ್ಯಜಾನಾತ್ ಎನ್ನುತ್ತದೆ ತೈತ್ತರೀಯ ಸಂಹಿತೆ. ಅಂದರೆ ಆನಂದವೇ ಬ್ರಹ್ಮ ಎಂಬ ಭಾವ. ಅದೇ ಆತ್ಯಂತಿಕ ಸತ್ಯ. ಅದನ್ನೇ ಉಪನಿಷತ್ತುಗಳು ಚಿದಾನಂದ, ಬ್ರಹ್ಮಾನಂದ ಇತ್ಯಾದಿ ಹೆಸರುಗಳಿಂದ ಕರೆಯುತ್ತವೆ. ಈ ಆತ್ಯಂತಿಕ ಆನಂದವನ್ನು ಪಡೆದವನಿಗೆ ಜಗತ್ತಿನ ಯಾವ ದು:ಖವೂ ತಟ್ಟುವುದಿಲ್ಲ.
ಈ ಆನಂದ ದೊರೆಯುವುದೆಲ್ಲಿ? ಹುಟ್ಟಿನಿಂದ ಸಾಯುವವರೆಗೆ ಮಾನವ ತನಗೆ ಸಿಗುವ ಎಲ್ಲ ವಸ್ತುಗಳಲ್ಲೂ, ತನಗೆದುರಾದ ಎಲ್ಲ ಸನ್ನಿವೇಶಗಳಲ್ಲೂ ಆನಂದವನ್ನು ಹುಡುಕುತ್ತಾನೆ. ಮೌನವಾಗಿದ್ದರೆ ಅಂತರಂಗದಲ್ಲಿ ಆನಂದವನ್ನನನುಭವಿಸಬಹುದೆಂದು ಮೌನವ್ರತವನ್ನು ಸ್ವೀಕರಿಸುತ್ತಾನೆ. ಪ್ರಿಯವ್ಯಕ್ತಿಗಳೊಂದಿಗೆ ಭಾವವನ್ನು ಹಂಚಿಕೊಂಡಾಗ ಆನಂದ ಸಿಗಬಹುದೆಂದು ಮಾತಿಗಿಳಿಯುತ್ತಾನೆ. ಕೆಲವರಿಗೆ ಹಾಸ್ಯ ಆನಂದದಾಯಕವಾಗಿರುತ್ತದೆ; ಮತ್ತೆ ಕೆಲವರು ಹಾಡಿನಲ್ಲಿ ತನ್ಮಯರಾಗಿ ಅನಿರ್ವಚನೀಯ ಆನಂದವನ್ನು ಅನುಭವಿಸುತ್ತಾರೆ. ಇನ್ನು ಕೆಲವರಿಗೆ ಪ್ರಣಯಚೇಷ್ಟೆಗಳಿಂದ ಆನಂದ ದೊರೆಯುತ್ತದೆ. ಮತ್ತೆ ಕೆಲ ಬಿಸಿರಕ್ತದ ಯುವಕರಿಗೆ ಶೌರ್ಯಪ್ರದರ್ಶನದಿಂದಲೋ ವಿಜಯಲಾಭದಿಂದಲೋ ಆನಂದ ದೊರೆಯುತ್ತದೆ. ಹೀಗೆ ಮಾನವ ಸಮಾಧಾನವನ್ನು ಎಲ್ಲೆಲ್ಲೂ ಹುಡುಕುತ್ತಾನೆ. ಆದರೆ ಅವನಿಗೆ ನಿಜವಾದ ಆನಂದ ಸಿಗುತ್ತದೆಯೆ?
ಸೌಂದರ್ಯವಿರುವುದು ವಸ್ತುವಿನಲ್ಲಲ್ಲ ನೋಡುವ ಕಣ್ಣಿನಲ್ಲಿ ಎಂಬ ಒಂದು ಮಾತಿದೆ. ಅದೇ ರೀತಿಯಲ್ಲಿಯೇ ಆನಂದವಿರುವುದೂ ನಮ್ಮ ಹೃದಯದಲ್ಲಿ-ಆತ್ಮದಲ್ಲಿ. ಅದು ಆತ್ಮನ ಗುಣ. ಆತ್ಮಾನಂದ ಆತ್ಯಂತಿಕವಾದುದು. ಅದಕ್ಕೆ ಕೊನೆಯಿಲ್ಲ. ತಮಗೊದಗಿದ ಕಷ್ಟದಲ್ಲೂ ಆನಂದವನ್ನು ಅನುಭವಿಸುವವರಿದ್ದಾರೆ. ಜೈನಯತಿಗಳು ಕೇಶಲುಂಚನ ಎಂಬ ಮೈಮೇಲಿನ ಕೂದಲುಗಳನ್ನು ಕೀಳುವ ಆ ವೇದನಾಪೂರ್ಣಕ್ರಿಯೆಯಲ್ಲೇ ಸಂತೋಷವನ್ನು ಕಾಣುತ್ತಾರೆ. ಮಲ್ಲಜಟ್ಟಿಯೋರ್ವನಿಗೆ ಕುಳಿತು ಉಣ್ಣುವುದು ಹಿಡಿಸದು. ಇನ್ನೊಬ್ಬ ಮಲ್ಲನೊಂದಿಗೆ ಹೋರಾಡುವುದೇ ಅವನಿಗೆ ಆನಂದದಾಯಕ. 
ನಗುವಾತ್ಮ ಪರಿಮಳವ ಪಸರಿಸುವ ಕುಸುಮ. ಆನಂದ ಎಂಬುದು ಎಲ್ಲ ರೋಗಗಳಿಗೂ ಮದ್ದು ಎಂಬುದನ್ನು ವೈದ್ಯರೂ ಒಪ್ಪುತ್ತಾರೆ. ಸಂತೋಷ ಏವ ಪುರುಷಸ್ಯ ಪರಂ ನಿದಾನಂ ಎಂಬ ಮಾತೂ ಅದನ್ನು ಪುಷ್ಟೀಕರಿಸುತ್ತದೆ. ಮನಸ್ಸು ಸಂತೋಷ ಸಮೃದ್ಧಿಯಿಂದ ಇದ್ದಷ್ಟೂ ಆಯುಷ್ಯವೃದ್ಧಿಯಾಗುತ್ತದೆ. ಆದ್ದರಿಂದಲೇ ಆನಂದವೇ ಬ್ರಹ್ಮ ಎನ್ನುವುದು.

1 comment:

keshavvd@gmail.com said...

ತುಂಬಾ ಚೆನ್ನಾಗಿದೆ

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...