Saturday, January 17, 2015

ಎದ್ದು ಬಾ ಧೀರತೆಯ ಸಂನ್ಯಾಸಿ ಎನ್ನೊಳಗೆ

ಎದ್ದು ಬಾ ಧೀರತೆಯ ಸಂನ್ಯಾಸಿ ಎನ್ನೊಳಗೆ
ಚಿಮ್ಮಿ ಬಾ ಚೈತನ್ಯ ಚಿಲುಮೆಯಾಗಿ
ಕಷ್ಟದಲು ಬತ್ತದೆ ಸಿಹಿನೀರ ಉಕ್ಕಿಸುವ
ಎನ್ನೆದೆಯ ಉತ್ಸಾಹ ಬುಗ್ಗೆಯಾಗಿ
ಎದ್ದು ಬಾ ಧೀರತೆಯ ಸಂನ್ಯಾಸಿ ಎನ್ನೊಳಗೆ
ಹೊಮ್ಮಿ ಬಾ ವಿವೇಕ ಜಲಧಿಯಾಗಿ
ಒಳಿತು ಕೆಡುಕುಗಳ ಭೇದದರಿವನು ಕೊಟ್ಟು
ಸತ್ಪಥದಿ ಕೊಂಡೊಯ್ವ ಹಂಸನಾಗಿ
ಎದ್ದು ಬಾ ಧೀರತೆಯ ಸಂನ್ಯಾಸಿ ಎನ್ನೊಳಗೆ
ಮೂಡಿ ಬಾ ಆನಂದ ಲಹರಿಯಾಗಿ
ಭವದ ದು:ಖವನಳಿಸಿ ಅಮರ ಸಂತಸವೀವ
ಎನ್ನೊಳಿರುವ ಪರಮಾತ್ಮ ಜ್ಯೋತಿಯಾಗಿ
ಎದ್ದು ಬಾ ಧೀರತೆಯ ಸಂನ್ಯಾಸಿ ಎನ್ನೊಳಗೆ
ಬೆಳೆದು ಬಾ ಸುಜ್ಞಾನಮೇರುವಾಗಿ
ಎನ್ನೊಳಗೆ ನಿನ್ನಿರವ ಅರಿಯಗೊಡದಧ್ಯಾಸ
ತೊಡೆದು ಹಾಕುವ ಜ್ಞಾನಸೂರ್ಯನಾಗಿ
-ಮಹಾಬಲ ಭಟ್, ಗೋವಾ

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...