ಮಹಿಳಾ
ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
“ಸನಾತನ ಭಾರತದ
ಸ್ತ್ರೀರತ್ನಗಳು”
ಭಾಗ – 23
ವೇದಕಾಲದ ಕೆಲವು ಋಷಿಕೆಯರು: (ಮುಂದುವರಿದುದು)
ವಾಗಾಂಭ್ರಣೀ: ಅಂಭ್ರಣ ಋಷಿಯ ಕುವರಿ ವಾಕ್ ಹತ್ತನೆಯ ಮಂಡಲದ ೧೨೫ ನೇ ಸೂಕ್ತದ ಋಷಿಕೆ. ಅತ್ಯುನ್ನತ
ಅದ್ವೈತತತ್ತ್ವವನ್ನು ಸಾಧಿಸಿದ್ದ ಈ ಬ್ರಹ್ಮವಾದಿನಿ ಸಚ್ಚಿತ್ಸುಖಾತ್ಮಕವಾದ ಪರಮಾತ್ಮನೊಂದಿಗೆ
ತಾದಾತ್ಮ್ಯವನ್ನನುಭವಿಸುತ್ತ ತನ್ನನ್ನೇ ತಾನು ಸ್ತುತಿಸಿಕೊಳ್ಳುತ್ತಾಳೆ. ತಾನೇ ಮರುತ್, ಮಿತ್ರ,
ರುದ್ರ ಎಂದೆಲ್ಲ ವರ್ಣಿಸುತ್ತ ಆತ್ಮ ಸರ್ವವನ್ನೂ ವ್ಯಾಪಿಸಿದೆ ಎಂಬ ಅದ್ವೈತ ತತ್ತ್ವವನ್ನು
ಸಾರುತ್ತಾಳೆ.
ಶ್ರದ್ಧಾ ಕಾಮಾಯನೀ: ಋಗ್ವೇದದ ಹತ್ತನೆಯ ಮಂಡಲದ ೧೫೧ ನೇ ಸೂಕ್ತದ ದೇವತೆ ಶ್ರದ್ಧಾ. ಐದು
ಮಂತ್ರಗಳ ಈ ಸೂಕ್ತದ ಋಷಿಕೆ ಶ್ರದ್ಧಾ ಕಾಮಾಯನೀ. ಜ್ಞಾನ ಸಂಪಾದನೆಯಲ್ಲಿ, ದಾನದಲ್ಲಿ, ಕೆಲಸದಲ್ಲಿ
ಹೀಗೆ ಜೀವನದ ಪ್ರತಿಯೊಂದು ಕ್ಷಣದಲ್ಲೂ ಶ್ರದ್ಧೆ ಬೇಕು ಎಂಬುದನ್ನು ಭಗವದ್ಗೀತಾದಿಯಾಗಿ ಅನೇಕ
ಗ್ರಂಥಗಳು ಹೇಳಿವೆ. ಈ ಸೂಕ್ತದಲ್ಲಿ ಋಷಿಕೆಯು ಅದನ್ನೇ ಹೇಳುತ್ತಾಳೆ. ಬೆಳಿಗ್ಗೆ, ಮಧ್ಯಾಹ್ನ,
ಸಂಜೆ ಹೀಗೆ ಎಲ್ಲ ಕಾಲದಲ್ಲಿಯೂ ಶ್ರದ್ಧಾದೇವಿಯ ಅನುಗ್ರಹವಾಗಲಿ ಎಂದು ಬೇಡಿಕೊಳ್ಳುತ್ತಾಳೆ.
ಸರ್ಪರಾಜ್ಞೀ: ಋಗ್ವೇದದ ಹತ್ತನೆಯ ಮಂಡಲದ ೧೮೯ ನೇ ಸೂಕ್ತದ ಋಷಿಕೆ ಸರ್ಪರಾಜ್ಞೀ. ಸೂರ್ಯದೇವತಾಪರಕವಾದ ಇ
ಸೂಕ್ತದಲ್ಲಿ ಗಾಯತ್ರಿ ಛಂದಸ್ಸಿನ ಮೂರು ಋಕ್ಕುಗಳು ಮಾತ್ರ ಇವೆ. ಈ ಸೂಕ್ತ ಇತರ ವೇದಗಳಲ್ಲಿಯೂ
ಕಾಣಸಿಗುತ್ತದೆ.
ಮಹಾಬಲ ಭಟ್, ಗೋವಾ
No comments:
Post a Comment