Wednesday, September 21, 2016

ತಿಂಗಳಿಗೊಂದು ಪುಸ್ತಕ - ೪

ಕ್ಷಣ ಹೊತ್ತು ಆಣಿ ಮುತ್ತು’ ಹೊಟೆಲ್ ಉದ್ಯಮಿ ಎಸ್. ಷಡಕ್ಷರಿಯವರ ಕೃತಿ. ಅಂದಾಕ್ಷಣ ಅದು ಹೊಟೆಲ್ ಉದ್ಯಮಕ್ಕೆ ಸಂಬಂಧಿಸಿದ ಪುಸ್ತಕವಲ್ಲ. ಶಾಲಾ ಕಾಲೇಜುಗಳಲ್ಲಿ ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ನಡೆಸಿಕೊಡುವ ಷಡಕ್ಷರಿಯವರು ತಮ್ಮ ಅಪಾರ ಅನುಭವದಿಂದ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರತಿದಿನ ಬರೆಯುತ್ತಿದ್ದ ಅಂಕಣ ಬರಹಗಳ ಸಂಗ್ರಹ ಇದು.

ಈ ಕೃತಿಯ ಹೆಸರು ಒಂದು ಅನ್ವರ್ಥನಾಮ. ಧಾವಂತದ ಜೀವನದಲ್ಲಿ ಒಂದು ಕ್ಷಣ ನಿಂತು ಯೋಚಿಸಬೇಕಾದ ಚಿಂತನೆಯ ಮುತ್ತುಗಳ ಸಂಕಲನ ಇದು. ಹಾಗಂತ ಒಣ ತತ್ತ್ವಶಾಸ್ತ್ರವಿಲ್ಲ ಇಲ್ಲಿ. ಜೀವನ ಮೂಸೆಯಲ್ಲಿ ಬೆಂದು ಪಕ್ವವಾದ ಅನೇಕ ಜೀವಿಗಳ ಜೀವನದರ್ಶನ ಪ್ರತಿಯೊಂದು ಮುತ್ತಿನಲ್ಲಿಯೂ ಅಡಕವಾಗಿದೆ. ಇಲ್ಲಿ ಉಲ್ಲಿಖಿತವಾದ ಘಟನೆಗಳು ಸಾಮಾನ್ಯ ವ್ಯಕ್ತಿಯ ಜೀವನದಲ್ಲೂ ಬಂದು ಹೋಗುವಂತವೇ. ಆದರೆ ಅಂತಹ ಸಂದರ್ಭಗಳಲ್ಲಿ ವರ್ತಿಸುವ ರೀತಿಯೇ ಅಸಾಮಾನ್ಯರನ್ನು ಸಾಮಾನ್ಯರಿಂದ ಭಿನ್ನವಾಗಿ ನಿಲ್ಲಿಸುತ್ತದೆ. ವ್ಯಕ್ತಿತ್ವ ವಿಕಸನದ ಮುಖ್ಯ ಪಾಠ – ’ಜೀವನದಲ್ಲಿ ಆಶಾವಾದಿಯಾಗಿರಿ. ನಿಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆ ಇಡಿ’ ಎಂಬುದೇ ಆಗಿದೆ ಎಂದು ನಮಗೆಲ್ಲ ಗೊತ್ತು. ಇಲ್ಲಿನ ಬರಹಗಳೆಲ್ಲ ಅದನ್ನೇ ಹೇಳುತ್ತಿದ್ದರೂ ಇಲ್ಲಿರುವ ದೃಷ್ಟಾಂತಗಳು ಮನಮುಟ್ಟುವಂತಿದೆ. ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡವರನ್ನೂ ಎಬ್ಬಿಸಿ ನಿಲ್ಲಿಸುವ ಸಾಮರ್ಥ್ಯವನ್ನು ಈ ಬರಹಗಳು ಹೊಂದಿವೆ ಎಂದರೆ ಅತಿಶಯೋಕ್ತಿಯಾಗಲಾರದು. ಕೃತಿಯ ಹೆಸರೇ ಹೇಳುವಂತೆ ಒಂದೇ ಪೇಜಿಗೆ ಸೀಮಿತವಾದ ಚಿಕ್ಕ ಚಿಕ್ಕ ಬರಹಗಳಿವೆ. ಕಥಾಪ್ರಿಯರೂ, ಪ್ರಬಂಧದ ಓದುಗರೂ ಸಮಾನವಾದ ಆನಂದವನ್ನು ಈ ಕೃತಿಯಿಂದ ಪಡೆಯಬಹುದು.


ಎಸ್.ಎಲ್.ಭೈರಪ್ಪನವರ ಮುನ್ನುಡಿ, ವಿಶ್ವೇಶ್ವರ ಭಟ್ಟರ ಹಿನ್ನುಡಿ, ಕನ್ನಡದ ಖ್ಯಾತನಾಮ ಬರಹಗಾರರ ಚೆನ್ನುಡಿಗಳು ೭೫ ಮುತ್ತುಗಳ ಸರಸ್ವತಿಯ ಹಾರಕ್ಕೆ ಮೆರಗನ್ನು ನೀಡಿವೆ. ೯೦ ದಿನಗಳಲ್ಲಿ ದಾಖಲೆಯ ೫೦೦೦೦ ಸಾವಿರ ಪ್ರತಿಗಳು ಮಾರಾಟವಾಗಿದ್ದು ೧೦ ಬಾರಿ ಮುದ್ರಣಗೊಂಡಿವೆ. ಸುಂದರ ಮುಖಪುಟ, ತಪ್ಪಿಲ್ಲದ ಮುದ್ರಣ, ಕೇವಲ ೭೫ ರೂಪಾಯಿಯಷ್ಟು ಕಡಿಮೆ ಬೆಲೆ ಪುಸ್ತಕದ ಮೌಲ್ಯವನ್ನು ಹೆಚ್ಚಿಸಿವೆ. ಕನ್ನಡ ಬಲ್ಲವರೆಲ್ಲ ಓದಿ ಮನನ ಮಾಡಬೇಕಾದ ಉತ್ಕೃಷ್ಟ ಕೃತಿಯಿದು.

Wednesday, August 24, 2016

’ಕರ್ಮ’ ಕಾದಂಬರಿ

ಶ್ರೀ ಕರಣಂ ಪವನ ಪ್ರಸಾದರ ಚೊಚ್ಚಲ ಕಾದಂಬರಿ ’ಕರ್ಮ’ವನ್ನು ಇದೀಗ ಓದಿ ಮುಗಿಸಿದೆ. ಶ್ರೀಕಂಠ ದೀಕ್ಷಿತ ಎಂಬ ಬ್ರಾಹ್ಮಣ ಸತ್ತಾಗ ನಡೆಯುವ ಅವರ ಔರ್ಧ್ವದೈಹಿಕ ಕರ್ಮಗಳ ಸುತ್ತ ಹೆಣೆದ ಕಥಾಹಂದರ ಈ ಕೃತಿ
.
ನಮ್ಮ ಧಾರ್ಮಿಕ ಆಚರಣೆಗಳೆಲ್ಲ ಮೌಢ್ಯ ಎಂದು ಪ್ರತಿಪಾದಿಸುವ ಒಂದು ಪಂಗಡ, ಇಲ್ಲ, ಎಲ್ಲವೂ ವೈಜ್ಞಾನಿಕ ಎಂದು ವಾದಿಸುವ ಇನ್ನೊಂದು ಪಂಗಡ ಇವುಗಳ ಜಗಳದಲ್ಲಿ ಸತ್ಯದ ಕೂಸು ಬಡವಾಗಿದೆ. ಈ ಎರಡೂ ಪಂಗಡಗಳಲ್ಲಿ ಕಾಣಬರುವ ಮುಖ್ಯ ಕೊರತೆ ಅಧ್ಯಯನದ್ದು. ಇಬ್ಬರದ್ದೂ ಪೂರ್ವಗ್ರಹ ವಾದವೇ. ಆಧುನಿಕ ಜೀವನಶೈಲಿಗೆ ಮಾರುಹೋದವರು ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಸಲುವಾಗಿ ಮೊದಲ ಪಂಗಡಕ್ಕೆ ಸೇರಿದರೆ, ಪರಂಪರಾಗತವಾಗಿ ಬಂದಿರುವ ಆಚರಣೆಗಳೇ ನಮ್ಮನ್ನು ಮುಕ್ತಿಯೆಡೆಗೆ ಒಯ್ಯುತ್ತವೆ, ಅವು ನಮ್ಮ ಕರ್ತವ್ಯಕರ್ಮ ಎಂದು ತಿಳಿದವರು ಎರಡನೆಯ ಪಂಗಡಕ್ಕೆ ಸೇರುತ್ತಾರೆ. ಪ್ರಸ್ತುತ ಕಾದಂಬರಿಯ ತಿರುಳೇ ಅದು. ಆಧುನಿಕತೆಯ ಲಕ್ಷಣ ಎಂಬಂತೆ ಪ್ರತಿಪಾದಿತವಾಗುವ ಮಾಂಸ ಭಕ್ಷಣ, ಮದಿರಾಪಾನ, ಹೆಣ್ಣಿನ ಸಹವಾಸ, ಕ್ಲಬ್ಬಿನ ನರ್ತನ ಇವೆಲ್ಲವಕ್ಕೂ ಒಗ್ಗಿಕೊಂಡಿದ್ದ ಬ್ರಾಹ್ಮಣ ಗ್ರಹಸ್ಥ(?)ನೊಬ್ಬ ತನ್ನಪ್ಪನ ಅಪರ ಕ್ರಿಯೆಯನ್ನು ಮಾಡಬೇಕಾಗಿ ಬಂದಾಗ ಅವನಲ್ಲಾಗುವ ತಳಮಳ, ಅಲ್ಲಿನ ಕರ್ಮಾಂಗಗಳನ್ನು ಒಪ್ಪಲಾರದ, ಒಪ್ಪದೇ ಇರಲಾರದ ಸ್ಥಿತಿಯಲ್ಲಿನ ತೊಳಲಾಟಗಳೇ ಕಾದಂಬರಿಯ ಜೀವವಸ್ತು. ಬೇರೆಯವರ ಮೇಲಿನ ನಿನ್ನ ಅವಲಂಬನೆ ನಂಬಿಕೆ, ನಿನ್ನ ಮೇಲಿನ ನಿನ್ನ ಅವಲಂಬನೆ ಶ್ರದ್ಧೆ. ನಂಬಿಕೆ ಚಂಚಲ, ಶ್ರದ್ಧೆ ಅಚಲ ಎಂಬುದು ಲೇಖಕರ ವೈಚಾರಿಕ ಸೂತ್ರ. ಸುರೇಂದ್ರನೆಂಬ ಐ.ಟಿ. ಜೀವಿ, ಅವನಿಗೆ ತಕ್ಕಳಾದ ಸ್ನೇಹಾ ಎಂಬ ಆಧುನಿಕ ಗರತಿ, ನರಹರಿಯೆಂಬ ಹಳ್ಳಿಯ ಬ್ರಾಹ್ಮಣಯುವಕ, ವೈಚಾರಿಕ ನಾಟಕದ ದಿಗ್ದರ್ಶಕ ಪುರುಷೋತ್ತಮ, ವಿದೇಶಕ್ಕೂ ಹೋಗಿಬಂದು ಇಂಗ್ಲೀಷ ಭಾಷೆಯನ್ನೂ ಆಡಬಲ್ಲ ಕರ್ಮಠ ಪುರೋಹಿತ ವೆಂಕಟೇಶ ಭಟ್ಟರು ಇವೆಲ್ಲ ಕೃತಿಕಾರನಿಂದ ಸೃಷ್ಟಿಸಲ್ಪಟ್ಟ ಸುಂದರ ಪಾತ್ರಗಳು.

ಇದನ್ನೊಂದು ವೈಚಾರಿಕ ಕಾದಂಬರಿ ಎನ್ನಬಹುದು. ಹದಿನೈದು ದಿನಗಳ ಕರ್ಮಾಂಗದ ವಿಶದ ನಿರೂಪಣೆ ಗ್ರಂಥಕರ್ತನ ಅಧ್ಯಯನಶೀಲತೆಗೆ ಹಿಡಿದ ಕೈಗನ್ನಡಿ. ಅಲ್ಲಲ್ಲಿ ಉದ್ಧರಿಸಿರುವ ಸಂಸ್ಕೃತ ಶ್ಲೋಕಗಳು ಹಾಗೂ ಕರ್ಮಾಂಗ ಮಂತ್ರಗಳು ಶುದ್ಧವಾಗಿದ್ದು (ಆರ್.ಗಣೇಶರು ತಿದ್ದುವಲ್ಲಿ ಸಹಕರಿಸಿದ್ದಾರೆ ಎಂದು ಲೇಖಕರೇ ಉಲ್ಲೇಖಿಸಿದ್ದಾರೆ) ಸಂಸ್ಕೃತಜ್ಞರಿಗೂ ಕಿರಿಕಿರಿಯನ್ನುಂಟುಮಾಡುವುದಿಲ್ಲ. ಲೇಖಕರ ಮೊದಲ ಕೃತಿಯಾದುದರಿಂದ ನಿರೂಪಣಾ ಶೈಲಿಯಲ್ಲಿನ ಸ್ವಲ್ಪಮಟ್ಟಿನ ಶಿಥಿಲತೆ ಕ್ಷಮಾರ್ಹ. ಈ ಕೃತಿ ಮೂರೇ ವರ್ಷಗಳಲ್ಲಿ ನಾಲ್ಕು ಮುದ್ರಣಗಳನ್ನು ಕಂಡಿದೆ. ಕನ್ನಡ ಸಾಹಿತ್ಯ ಪ್ರಪಂಚದ ಮಟ್ಟಿಗೆ ಇದು ಒಂದು ಸಾಧನೆಯೇ. ಮುದ್ರಾರಾಕ್ಷಸನ ಹಾವಳಿಗೆ ತುತ್ತಾಗದೆ ಓದುಗರ ಮನಗೆಲ್ಲುವ ಈ ಕೃತಿ ನಮ್ಮ ಮಸ್ತಕಕ್ಕೆ ಹಾಗೂ ಪುಸ್ತಕಸಂಗ್ರಹಕ್ಕೆ ಸೇರುವ ಯೋಗ್ಯತೆಯನ್ನು ಹೊಂದಿದೆ. ಪುಟಗಳು ೧೬೧; ಬೆಲೆ ೧೩೫ ರೂ. ಪ್ರಕಾಶನ: ಕೊನ್ ಕೇವ್ ಮೀಡಿಯಾ ಕಂ.,ಬೆಂಗಳೂರು. ವಿದ್ವಾನ್ ನವೀನ ಭಟ್ಟ ಗಂಗೋತ್ರಿಯವರು ಈ ಕಾದಂಬರಿಯನ್ನು ಇಂಗ್ಲೀಷಿಗೆ ಅನುವಾದಿಸಿದ್ದು ಅದೂ ಕೂಡ ಲಭ್ಯವಿದೆ.

Wednesday, July 13, 2016

’ಬ್ರಹ್ಮಪುರಿಯ ಭಿಕ್ಷುಕ’ ನ ಜೀವನಯಾತ್ರೆ


‘ಡಿವಿಜಿ ಕನ್ನಡ ಸಾಹಿತ್ಯವನದ ಅಶ್ವತ್ಥವೃಕ್ಷ. ಬರೆದಂತೆ ಬಾಳಿದ ವಿರಳರೀತಿಯ ಮಹಾನುಭಾವರಲ್ಲಿ ಇವರು ಅಗ್ರಗಣ್ಯರು. ಸಾಹಿತ್ಯ, ಸಂಸ್ಕೃತಿ, ಪತ್ರಿಕೋದ್ಯಮ, ಸಮಾಜಸೇವೆಗಳಂತಹ ಹತ್ತಾರು ಗಂಭೀರ ಪ್ರಕಾರಗಳಲ್ಲಿ ದುಡಿದ ಡಿವಿಜಿಯವರ ಬದುಕೇ ಒಂದು ಮಹಾಕಾವ್ಯ. ಇಂಥ ಜೀವನರಸಿಕರ ಬಾಳಿನಲ್ಲಿ ನಡೆದ ನೂರಾರು ರಸಮಯ ಪ್ರಸಂಗಗಳ ರೋಚಕ ಹಾಗೂ ಉದ್ಬೋಧಕ ನಿರೂಪಣೆ ಇಲ್ಲಿದೆ. ಡಿವಿಜಿಯವರ ವಿದ್ವತ್ತೆ, ವಿನಯ, ನಿಸ್ಪೃಹತೆ, ನಿರ್ಮಮತೆ, ಸೌಜನ್ಯ, ಸ್ನೇಹ ಮುಂತಾದ ಅನೇಕ ಮುಖಗಳು ಅವರಿಗೇ ವಿಶಿಷ್ಟವಾದ ಹಾಸ್ಯ-ವಿನೋದಗಳ, ಕಾವ್ಯ-ಕಲೆಗಳ ರಸಪಾಕವಾಗಿ ಇಲ್ಲಿ ಪ್ರತಿಫಲಿಸಿದೆ.

ಇದು ತಮ್ಮದೇ ಬ್ರಹ್ಮಪುರಿಯ ಭಿಕ್ಷುಕ ಎಂಬ ಪುಸ್ತಕದ ಬಗ್ಗೆ ಶತವಾಧಾನಿ ಆರ್. ಗಣೇಶರು ಬರೆದ ಹಿನ್ನುಡಿ. ಡಿವಿಜಿಯವರ ಬಗ್ಗೆ ಬರೆದ ಪುಸ್ತಕಗಳಲ್ಲಿ ಇದೊಂದು ವಿಶಿಷ್ಟವಾದ ಹೊತ್ತಗೆ. ಲೇಖಕರೇ ಹೇಳುವಂತೆ ಹಾ.ಮಾ. ನಾಯಕರ ವೆಂಕಣ್ಣಯ್ಯ ಪ್ರಸಂಗಗಳು ಎಂಬ ಗ್ರಂಥದಿಂದ ಪ್ರೇರಣೆ ಪಡೆದು ಬರೆದ ಪುಸ್ತಕವಿದು. ಡಿವಿಜಿಯವರು ತಮ್ಮ ಸಮಕಾಲೀನರಾದ ಸರ್ ಎಂ. ವಿಶ್ವೇಶ್ವರಯ್ಯ, ಬಿ.ಎಂ.ಶ್ರೀ., ವಿ.ಸೀ., ಮಿರ್ಜಾ ಇಸ್ಮಾಯಿಲ್ ಮುಂತಾದವರೊಂದಿಗೂ ತಮ್ಮ ಶಿಷ್ಯರಾದ ಎಸ್.ಆರ್.ರಾಮಸ್ವಾಮಿ, ವಿದ್ವಾನ್ ರಂಗನಾಥ ಶರ್ಮಾ, ಟಿ.ಎನ್.ಪದ್ಮನಾಭನ್ ಮೊದಲಾದ ಶಿಷ್ಯರೊಡನೆಯೂ ಕಳೆದ ರಸನಿಮಿಷಗಳು ಈ ಪುಸ್ತಕದಲ್ಲಿ ದಾಖಲಾಗಿವೆ. ಡಿವಿಜಿಯವರ ಪಟ್ಟಶಿಷ್ಯರಾಗಿ ಅವರ ಕೊನೆಗಾಲದಲ್ಲಿ ಆಧಾರಸ್ತಂಭವಾಗಿ ನಿಂತಿದ್ದ ಶ್ರೀ ಎಸ್. ಆರ್. ರಾಮಸ್ವಾಮಿಯವರಿಗೆ ಲೇಖಕರು ತಮ್ಮ ಛಂದೋಬದ್ಧ ಕನ್ನಡ ಹಾಗೂ ಸಂಸ್ಕೃತಪದ್ಯಗಳ ಮೂಲಕ ಈ ಗ್ರಂಥವನ್ನು ಅರ್ಪಿಸಿದ್ದಾರೆ.

ತೈತ್ತರೀಯ ಉಪನಿಷತ್ತಿನ ಆಧಾರದಲ್ಲಿ ಅನ್ನಮಯಕೋಶ, ಪ್ರಾಣಮಯಕೋಶ, ಮನೋಮಯಕೋಶ, ವಿಜ್ಞಾನಮಯಕೋಶ, ಆನಂದಮಯಕೋಶ ಎಂಬ ಐದು ವಿಭಾಗಗಳಲ್ಲಿ ನೂರಾರು ಪ್ರಸಂಗಗಳನ್ನು ಈ ಪುಸ್ತಕ ಒಳಗೊಂಡಿದೆ. ಡಿವಿಜಿಯವರು ಅನ್ನಕ್ಕಾಗಿ ಆಶ್ರಯಿಸಿದ್ದ ಪತ್ರಿಕಾ ಸಂಪಾದಕತ್ವದ ಸಮಯದಲ್ಲಿ ನಡೆದಿದ್ದ ಗಂಭೀರ ಪ್ರಸಂಗಗಳು ಅನ್ನಮಯ ಕೋಶದಲ್ಲಿವೆ. ಡಿವಿಜಿಯವರು ಪಾಲಿಸಿದ ಪತ್ರಿಕಾಧರ್ಮ, ಆದರ್ಶ, ಹಾಗೂ ಪತ್ರಿಕಾರಂಗದಲ್ಲಿ ಅವರ ಏಳು ಬೀಳುಗಳು ಇಲ್ಲಿ ಚಿತ್ರಿತವಾಗಿವೆ. ಡಿವಿಜಿಯವರ ಪ್ರಾಣಗಳಾದ ಸಂಗೀತ, ಸಾಹಿತ್ಯ, ಆಧ್ಯಾತ್ಮ, ಭಾಷಾಭಿಮಾನ, ಸಂಸ್ಕೃತ ಮುಂತಾದವುಗಳಿಗೆ ಸಂಬಂಧಿಸಿದ ಘಟನೆಗಳು ಪ್ರಾಣಮಯಕೋಶದಲ್ಲಿ ದಾಖಲಾಗಿವೆ. ಡಿವಿಜಿಯವರ ಮನೋವೈಶಾಲ್ಯತೆ, ಮನೋದಾರ್ಢ್ಯತೆ, ಸ್ನೇಹಭಾವಗಳಿಗೆ ಸಂಬಂಧಿಸಿದ ಪ್ರಸಂಗಗಳನ್ನು ಮನೋಮಯಕೋಶ ಒಳಗೊಂಡಿದೆ. ಡಿವಿಜಿಯವರ ವಿನೋದಪ್ರಜ್ಞೆ, ಪ್ರತ್ಯುತ್ಪನ್ನಮತಿತ್ವದ ಘಟನೆಗಳು ವಿಜ್ಞಾನಮಯಕೋಶದಲ್ಲಿರುವ ಪ್ರಸಂಗಗಳು. ಅವರ ಖಾದ್ಯಪ್ರಿಯತೆ, ಆನಂದ ಲಹರಿ, ಉದಾತ್ತವಿಚಾರಗಳು ಆನಂದಮಯಕೋಶದಲ್ಲಿ ಪ್ರತಿಬಿಂಬಿತವಾಗಿವೆ.

’ಡಿವಿಜಿಸಂಜ್ಞಿತ: ಕೋಽಪಿ ಬ್ರಹ್ಮಪತ್ತನಭಿಕ್ಷುಕ:’ ಎಂಬ ಡಿವಿಜಿಯವರ  ವಚನವನ್ನೇ ಆಧಾರವಾಗಿಟ್ಟುಕೊಂಡು ಲೇಖಕರು ಈ ಪುಸ್ತಕಕ್ಕೆ ’ಬ್ರಹ್ಮಪುರಿಯ ಭಿಕ್ಷುಕ’ ಎಂದು ನಾಮಕರಣ ಮಾಡಿದ್ದಾರೆ. ಡಿವಿಜಿಯವರ ಒಡನಾಡಿಗಳೂ, ಅನಂತರದ ಪೀಳಿಗೆಯ ಲೇಖಕರೂ ಬರೆದ ಅನೇಕ ಲೇಖನಗಳನ್ನು ಓದಿ, ಅವರೊಂದಿಗಿನ ಮಾತುಕತೆಯಲ್ಲಿ ವಿಷಯವನ್ನು ಸಂಗ್ರಹಿಸಿ ತಮ್ಮದೇ ಆದ ಶೈಲಿಯಲ್ಲಿ ಈ ಘಟನೆಗಳನ್ನು ನಿರೂಪಿಸಿದ್ದಾರೆ. ಡಿವಿಜಿಯವರು ರಚಿಸಿದ ಅನೇಕ ತೆಲುಗು ಕಂದಪದ್ಯಗಳನ್ನೂ, ಸಂಸ್ಕೃತಶ್ಲೋಕಗಳನ್ನೂ ಉದಾಹರಿಸಿರುವ ಲೇಖಕರು ಅವುಗಳಿಗೆಲ್ಲ ತಮ್ಮದೇ ಪದ್ಯರೂಪ ಅನುವಾದವನ್ನು ಕೊಟ್ಟಿದ್ದಾರೆ. ಸ್ವತ: ಪ್ರತಿಭಾಸಂಪನ್ನ ಆಶುಕವಿಯಾಗಿರುವ ಶತಾವಧಾನಿಗಳು ಈ ಪದ್ಯಗಳಲ್ಲಿರುವ ಲಘು ಮಾತ್ರಾದೋಷಗಳನ್ನೂ, ಯತಿಮೈತ್ರಿಯ ಅಭಾವವನ್ನೂ ಸೂಕ್ಷ್ಮವಾಗಿ ಗಮನಿಸಿ ಉಲ್ಲೇಖಿಸಿದ್ದಾರೆ. ಡಿವಿಜಿಯವರ ಒಂದು ಸಂಸ್ಕೃತಶ್ಲೋಕ ಹಾಗೂ ಗಣೇಶರ ಅನುವಾದವನ್ನು ನೋಡಿ.

ಅನ್ನಸಿಂಹಾಸನಾಸೀನೋ ಘೃತಮಂತ್ರಿ ಸಮನ್ವಿತ: |
ಸೋಪಸ್ಕರಪರೀವಾರ: ಸೂಪಭೂಪೋ ವಿರಾಜತೇ ||
ಅನ್ನಸಿಂಹಾಸನದ ಮೇಲೆ ಕುಳಿತು
ತುಪ್ಪವೆಂಬ ಮಂತ್ರಿಯೊಡನಿರಲ್ಕೆ |
ವಿವಿಧಸಾಂಭಾರಗಳ ಪರಿಜನರೊಡಂ
ತೊವ್ವೆಯೆಂಬುವ ನೃಪಂ ಮೆರೆವನಲ್ತೆ ||

ಡಿವಿಜಿಯವರ ಬಡತನದಲ್ಲಿಯೂ ಬಿಡದ ನಿಸ್ಪೃಹತೆ, ಕಷ್ಟಕಾಲದಲ್ಲಿಯೂ ತ್ಯಜಿಸದ ಧ್ಯೇಯನಿಷ್ಠತೆ, ಸಂದಿಗ್ಧ ಪರಿಸ್ಥಿತಿಗಳಲ್ಲೂ ಬಿಟ್ಟಿರದ ಸ್ನೇಹಪರತೆ, ಯಾರಿಗೂ ಬಗ್ಗದ ಆತ್ಮಗೌರವ ಇಂತಹ ಅಸಾಧಾರಣಗುಣಗಳೊಂದಿಗೆ ಸಾಮಾನ್ಯಮಾನವಸಹಜವಾದ ಭೋಜನಪ್ರಿಯತೆ, ವಿನೋದಪ್ರಜ್ಞೆ, ಪೋಲಿಗುಣಗಳೂ ಈ ರಸಪ್ರಸಂಗಗಳಲ್ಲಿ ಅಡಕವಾಗಿವೆ. ಸಾಮಾನ್ಯವಾಗಿ ಪ್ರೌಢಶೈಲಿಯಲ್ಲಿಯೇ ಲೇಖನಗಳನ್ನು ಬರೆಯುವ ಅವಧಾನಿಗಳು ಇಲ್ಲಿ ತಮ್ಮ ಭಾಷೆಯನ್ನು ಸರಳಗೊಳಿಸಲು ಯತ್ನಿಸಿದ್ದಾರೆ. ಆದರೂ ಅವರ ಶೈಲಿಯ ಸಹಜತೆ ಎಂಬಂತೆ ಅಪರೂಪದ ಪದಗಳು ಅಲ್ಲಲ್ಲಿ ನುಸುಳಿವೆ. ಪ್ರತಿಯೊಂದು ಘಟನೆಯೂ ಒಂದೂವರೆ ಪುಟಕ್ಕಿಂತ ಕಡಿಮೆಗಾತ್ರವನ್ನು ಹೊಂದಿರುವುದು ಓದುಗರಿಗೆ ಅನುಕೂಲವಾಗಿದೆ. ಮೊದಮೊದಲಿಗೆ ಗಂಭೀರಪ್ರಸಂಗಗಳನ್ನು ಹೊಂದಿದ್ದರೂ  ಉತ್ತರೋತ್ತರ ಕೋಶಗಳನ್ನು ಪ್ರವೇಶಿಸಿದ ಹಾಗೇ ನಗೆಗಡಲು ಉಕ್ಕುತ್ತಲೇ ಹೋಗುತ್ತದೆ. ಓದುತ್ತ ಹೋದಂತೆ ಸಮಯ ಸರಿದುದುದೇ ತಿಳಿಯುವುದಿಲ್ಲ. ಡಿವಿಜಿ ಅಭಿಮಾನಿಗಳೆಲ್ಲ ಅತ್ಯವಶ್ಯವಾಗಿ ಓದಬೇಕಾದ ಪುಸ್ತಕವಿದು. ೧೬೦ ಪುಟಗಳ ಸುಂದರ ವಿನ್ಯಾಸ, ತಪ್ಪಿಲ್ಲದ ಮುದ್ರಣದ ಈ ಪುಸ್ತಕವನ್ನು ಡಿವಿಜಿಯವರ ಅನೇಕ ಪುಸ್ತಕಗಳನ್ನು ಪ್ರಕಾಶಿಸಿರುವ ಸಾಹಿತ್ಯ ಪ್ರಕಾಶನ ನಮ್ಮ ಕೈಗಿತ್ತಿದೆ.



Thursday, July 7, 2016

ನವಚಿಂತನೆಯ ನವಜೀವಗಳು




ಗ್ರೀಸಿನಾ ಕಬ್ಬಗಳನೋದುವರು ದೆಹಲಿಯಲಿ
ಕಾಶಿಯಾ ಶಾಸ್ತ್ರಗಳನಾಕ್ಸ್ಫರ್ಡಿನವರು |
ದೇಶಕಾಲವಿಭಾಗ ಮನದ ರಾಜ್ಯದೊಳಿರದು
ಶ್ವಾಸವದು ಬೊಮ್ಮನದು- ಮಂಕುತಿಮ್ಮ ||

ಭಾರತೀಯ ಸಂಸ್ಕೃತಿ ಅನೇಕ ದೇಶೀಯ ಹಾಗೂ ವಿದೇಶೀಯ ಚಿಂತಕರನ್ನೂ ಬರಹಗಾರರನ್ನೂ ಚಿಂತನೆಗೂ ಬರಹಕ್ಕೂ ಪ್ರೇರೇಪಿಸಿದೆ. ನಮ್ಮ ವೈದಿಕ ವಾಙ್ಮಯದಿಂದ ಹಿಡಿದು ಜಾನಪದ ಕಲೆಗಳವರೆಗೆ ವಿವಿಧ ಬೆರಗುಗಳು ಜಿಜ್ಞಾಸುಗಳನ್ನು ವಿಚಾರಲಹರಿಗೆ ಒಳಪಡಿಸಿವೆ. ಮೊಗೆದಷ್ಟೂ ಹೆಚ್ಚೆಚ್ಚು ಚಿಮ್ಮುವ ವಿಚಾರಗಳಿಂದಾಗಿ ಸತ್ಯಾಸತ್ಯತೆಯ ಒರೆಗೂ, ಒಳಿತು ಕೆಡುಕುಗಳ ಚಿಂತನೆಗೂ ಇವು ಸಿಲುಕಿವೆ.

ಭಾರತೀಯ ಸಂಸ್ಕೃತಿ-ಆಚರಣೆ-ಜನಜೀವನದ ಚಿತ್ರಣವನ್ನು ಮಾಡಿದ ವಿದೇಶೀಯರ ಸಾಲಿಗೆ ಇತ್ತೀಚೆಗೆ ಸೇರ್ಪಡೆಯಾದ ವಿಲಿಯಂ ಡಾಲ್ರಿಂಪಲ್ ಮೂಲತ: ಸ್ಕಾಟ್ಲೆಂಡಿನವರು. ಸದ್ಯ ದೆಹಲಿಯ ಹೊರವಲಯದಲ್ಲಿ ನೆಲೆಸಿರುವ ಇವರು ಭಾರತಾದ್ಯಂತ ಸಂಚರಿಸಿದಾಗ ಅವರ ಅಂತ:ಕರಣವನ್ನು ತಟ್ಟಿದ ಒಂಬತ್ತು ವ್ಯಕ್ತಿಗಳ ಬರಹರೂಪ ಚಿತ್ರಣವೇ ನವ ಜೀವಗಳು ಎಂಬ ಹೊತ್ತಗೆ. ಅದನ್ನು ಕನ್ನಡಕ್ಕೆ ನವಿರಾಗಿ ಅನುವಾದಿಸಿದವರು ಸದ್ಯ ಕೊಯಂಬತ್ತೂರಿನ ಮಾತಾ ಅಮೃತಾನಂದಮಯಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಸಂಸ್ಕೃತ ವಿದ್ವಾಂಸ ನವೀನ ಭಟ್ ಗಂಗೋತ್ರಿ.

ಪ್ರಾಚೀನ ಸಂಪ್ರದಾಯಗಳ ಮೇಲೆ ನೆಲೆನಿಂತು ಕಾಲಾಂತರದಲ್ಲಿ ವೈಚಾರಿಕತೆಗೆ ಸಿಕ್ಕಿಯೋ ಇಲ್ಲ ಸಾಮಾಜಿಕ ಪರಿವರ್ತನೆಯ ಹಾದಿಯಲ್ಲಿಯೋ ರೂಪಾಂತರ ಹೊಂದಿದ ಭಾರತೀಯ ಶ್ರದ್ಧೆ, ನಂಬಿಕೆ, ಆಚರಣೆಗಳೇ ಈ ಗ್ರಂಥದ ವಿಷಯ  ವಸ್ತು. ಇಂತಹ ಸಂಪ್ರದಾಯಗಳಿಗೆ ಅಂಟಿಕೊಂಡು ಹಿಂಸೆ-ಶಾಂತಿಗಳ ಮಧ್ಯೆ ತೊಳಲಾಡುವ ಜೀವಗಳ ಚಿತ್ರಣ ಗ್ರಂಥದ ಜೀವಾಳ.

ಮೊದಲ ಜೀವ ಒಬ್ಬಳು ಜೈನ ಸಂನ್ಯಾಸಿನಿಯದ್ದು. ಕರ್ನಾಟಕದ ಮಣ್ಣಿನವಾಸನೆಯನ್ನು ಹೊಂದಿದ ಈ ಕಥೆ ಸಹಜವಾಗಿಯೇ ಕನ್ನಡದ ಓದುಗರಿಗೆ ಆತ್ಮೀಯವೆನಿಸುತ್ತದೆ. ಈ ಪಾತ್ರದ ಮೂಲಕ ಜೈನಸಂಪ್ರದಾಯವನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ ಲೇಖಕರು. ಕೇಶಲುಂಚನ, ಸಲ್ಲೇಖನ ವ್ರತಗಳ ಬಗ್ಗೆ ಓದುವಾಗ ಸಹಜವಾಗಿಯೇ ಮೈ ಜುಮ್ಮೆನ್ನುತ್ತದೆ. ಎಲ್ಲ ಸಂಬಂಧಗಳನ್ನೂ ತೊರೆದಿರುವ ವಿರಾಗಿಣಿ ಸಂನ್ಯಾಸಿನಿಯೂ ತನ್ನ ಪ್ರಾಣಸ್ನೇಹಿತೆಯ ಸಾವಿನಿಂದ ವಿಚಲಿತವಾದುದು ವೈರಾಗ್ಯ ಹಾಗೂ ಮಾನವೀಯ ಭಾವನೆಗಳ ಮಧ್ಯೆಯ ಹೊಯ್ದಾಟವನ್ನು ಯಶಸ್ವಿಯಾಗಿ ಬಿಂಬಿಸುತ್ತದೆ. ಕೊನೆಯಲ್ಲಿ ಆ ಸಂನ್ಯಾಸಿನಿಯು ಚಿಕ್ಕವಯಸ್ಸಿನಲ್ಲಿಯೇ ಸಲ್ಲೇಖನವ್ರತ ಕೈಗೊಳ್ಳಲು ಮನಮಾಡಿದ್ದು ಒಂದು ರೀತಿಯ ಕಸಿವಿಸಿಯಿಂದಲೇ ಕಥೆಯನ್ನು ಓದಿ ಮುಗಿಸುವಂತೆ ಮಾಡುತ್ತದೆ.

ಎರಡನೆಯ ಕಥೆ ನಮ್ಮ ನೆರೆಯ ರಾಜ್ಯ ಕೇರಳದ್ದು. ಅಲ್ಲಿ ನೆಲೆಯೂರಿರುವ ತೆಯ್ಯಮ್ ಎಂಬ ಸಾಂಪ್ರದಾಯಿಕ ಕಲೆಯ ಕುರಿತಾದದ್ದು. ಕಣ್ಣೂರಿನ ಹರಿದಾಸ ಎಂಬ ದಲಿತ ಕುಲೋತ್ಪನ್ನ ತೆಯ್ಯಮ್ ತಿಂಗಳಿನಲ್ಲಿ ತನ್ನ ಮೇಲೆ ದೇವತೆಯ ಆವಾಹನೆಯಾದಾಗ ಬ್ರಾಹ್ಮಣರಿಂದಲೂ ಪೂಜಿತನಾಗುವುದನ್ನು ವಿಡಂಬನಾತ್ಮಕವಾಗಿ ಲೇಖಕರು ಚಿತ್ರಿಸಿದ್ದಾರೆ.

ಮೂರನೆಯ ಕಥೆ ಯೆಲ್ಲಮ್ಮನ ಹೆಣ್ಣುಮಕ್ಕಳಾದ ಜೋಗತಿಯರದ್ದು. ರಾಣಿಬಾಯಿ ಎಂಬ ದೇವದಾಸಿಯ ಸಂಪತ್ತು ಹಾಗೂ ಆಯುಷ್ಯದ ಮಧ್ಯದ ಹೋರಾಟ ಈ ಕಥೆಯ ಸಾರ. ದೇವದಾಸಿ ಪದ್ಧತಿಯ ಸ್ಥೂಲ ಚಿತ್ರಣವನ್ನೂ ಲೇಖಕರು ನೀಡಿದ್ದಾರೆ.

ನಾಲ್ಕನೆಯದ್ದು ರಾಜಸ್ಥಾನದ ಮರುಭೂಮಿಯ ಮೋಹನ ಎಂಬ ಜಾನಪದಕಾವ್ಯಗಾಯಕನ ಕಥೆ. ಕೆಲವೊಂದು ಅಂಶಗಳಲ್ಲಿ ರಾಮಾಯಣವನ್ನು ಹೋಲುವ ಪಭುಜೀಯ ಕಾವ್ಯದ ಅಸಾಧಾರಣ ಗಾಯಕನ ಜೀವನಕಥನವಿದು. ಫಾಡ್ ಎನ್ನುವ ಜಾನಪದೀಯ ಗಾಯಕಿಯ ಹಾಗೂ ಅದರ ಗಾಯಕನ ಏರಿಳಿತಗಳನ್ನು ಸಮರ್ಥವಾಗಿ ಚಿತ್ರಿಸಿದ್ದಾರೆ. ಮಧ್ಯೆ ಈ ಸಂಪ್ರದಾಯದ ಬಗ್ಗೆ ಸಾಕಷ್ಟು ಮಾಹಿತಿ ಹರಿದುಬರುವುದರಿಂದ ಇಲ್ಲಿ ಓದು ಸ್ವಲ್ಪ ನಿಧಾನವಾಗುತ್ತದೆ.

ಕೆಂಬಣ್ಣದ ಯಕ್ಷಿ ಎಂಬ ಐದನೆಯ ಬರಹ ಸಿಂಧ್ ಪ್ರದೇಶಕ್ಕೆ ಸಂಬಂಧಿಸಿದ್ದು. ಲಾಲ್ ಪೇರಿ ಎಂಬ ಪಾತ್ರದ ಮೂಲಕ ಸೂಫಿ ಸಂಪ್ರದಾಯದ ಮೇಲೆ ಬೆಳಕು ಚೆಲ್ಲುತ್ತಾರೆ ಲೇಖಕರು. ಭಾರತದಲ್ಲಿ ಸೂಫಿಸಂ ಬೆಳೆದುಬಂದ ಬಗೆ ಹಾಗೂ ವಹಾಬಿಸಂ ನಿಂದ ಸೂಫಿಸಂಗೆ ಆಗುತ್ತಿರುವ ಅಪಾಯಗಳ ಬಗೆಗೂ ಲೇಖಕರು ಬರೆದಿದ್ದಾರೆ.

ಟಿಬೆಟ್ಟಿನ ಪಸಂಗ್ ಎನ್ನುವ ಬೌದ್ಧ ಸಂನ್ಯಾಸಿಯ ಕಥೆ ಆರನೆಯ ಲೇಖನ. ಚೀನಿಯರ ದಬ್ಬಾಳಿಕೆಗೆ ಒಳಗಾಗಿ ಸಂನ್ಯಾಸ ಹಾಗೂ ಹೋರಾಟಗಳ ಮಧ್ಯೆ ತೊಳಲಾಡಿ ಏನೇನೋ ಆದ ತಶಿ ಪಸಂಗ್ ನ ಜೀವನ ಆಸಕ್ತಿಯನ್ನು ಹುಟ್ಟಿಸುತ್ತದೆ.

ಮೂರ್ತಿಗಳ ತಯಾರಕ ಶ್ರೀಕಂಠ ಏಳನೆಯ ಕಥೆಯ ನಾಯಕ. ಚೋಳರ ಶೈಲಿಯ ಕಂಚಿನ ದೇವರ ಮೂರ್ತಿಗಳನ್ನು ತಯಾರಿಸುವ ಶ್ರೀಕಂಠ ಸ್ಥಪತಿಯ ಜೀವನಗಾಥೆ ಆ ಕಲೆಯು ಆಧುನಿಕತೆಯ ಹೊಡೆತಕ್ಕೆ ಸಿಕ್ಕು ಅವಸಾನದ ಅಂಚಿನಲ್ಲಿರುವುದನ್ನು ದಾಖಲಿಸಿ ಕೊನೆಗೊಳ್ಳುತ್ತದೆ.

ಎಂಟನೆಯ ಕಥೆ ಮನೀಷಾ ಎಂಬ ವಾಮಾಚಾರಿಣಿಯ ಮೂಲಕ ಬಂಗಾಳದ ಶ್ಮಶಾನವೊಂದರ ತಾರಾಪೀಠವೆಂಬ ಶಕ್ತಿ ಕೇಂದ್ರದ ಜೀವನವನ್ನು ತೆರೆದಿಡುತ್ತದೆ. ಅತಿಭಯಂಕರವಾದ ವಾಮಾಚಾರಿಗಳ ಹೃದಯದಲ್ಲಿರುವ ಮಾನವೀಯ ಭಾವನೆಗಳನ್ನು ಉದ್ಘಾಟಿಸುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ.

ಎಂಟನೆಯ ಕಥೆಯ ಮುಂದುವರಿದ ಭಾಗದಂತಿರುವ ಒಂಭತ್ತನೆಯ ಕಥೆ ಕನಯ್ಯ, ಪಬನ್ ಮತ್ತು ದೇಬ್ ದಾಸ್ ಎನ್ನುವ ಬಾವ್ಲ್ ಹಾಡುಗಾರರ ಸುತ್ತ ಸುತ್ತುತ್ತದೆ. ಸಾಂಪ್ರದಾಯಿಕ ಆರಾಧನಾ ಪದ್ಧತಿಗೆ ಸೆಡ್ಡು ಹೊಡೆದು ಸಂಗೀತದ ಮೂಲಕ ಪ್ರೇಮಸ್ವರೂಪಿ ಆಧ್ಯಾತ್ಮವನ್ನು ಉಪಾಸಿಸಿ ಮೋಕ್ಷಸಾಧನೆ ಮಾಡುವ ತುಡಿತವನ್ನು ಚಿತ್ರಿಸಿದೆ.

ಭಾರತದ ವಿಭಿನ್ನ ಆಚರಣೆಗಳನ್ನೂ ಸಂಪ್ರದಾಯಗಳನ್ನೂ ತಮ್ಮ ಕಣ್ಣುಗಳಿಂದ ನೋಡಿದ್ದಾರೆ ಡಾಲ್ರಿಂಪಲ್. ವಿದೇಶೀಯರ ಅನೇಕ ಚಿಂತನೆಗಳು ನಮ್ಮಲ್ಲಿ ಸಾಮಾಜಿಕ ಕ್ರಾಂತಿಯನ್ನುಂಟುಮಾಡಿ ಅನಿಷ್ಟ ಸಂಪ್ರದಾಯಗಳನ್ನು ಕೊನೆಗಾಣಿಸುವಲ್ಲಿ ಸಹಾಯ ಮಾಡಿದೆ ಎಂಬುದು ನಿಜ. ಲೇಖಕರು ದಾಖಲಿಸಿದ ಮುಖವೊಂದು ನಮ್ಮ ದೇಶದಲ್ಲಿ ಕಾಣಸಿಗುವುದೂ ಸತ್ಯ. ಆದರೆ ವಿದೇಶೀಯರು ಭಾರತದ ಬಗ್ಗೆ ಬರೆಯುವಾಗ ಹಳದಿ ಕನ್ನಡಕವನ್ನು ಧರಿಸಿರುತ್ತಾರೆ ಎನ್ನುವುದು ಈ ಲೇಖಕರ ವಿಷಯದಲ್ಲೂ ಸುಳ್ಳಲ್ಲವೇನೋ ಅನ್ನಿಸುತ್ತದೆ. ಜೈನ ಸಂನ್ಯಾಸಿನಿಯ ಸಲ್ಲೇಖನ ನಿರ್ಧಾರದಲ್ಲಿಯೂ, ಮೋಹನನ ದುರಂತ ಸಾವಿನಲ್ಲೂ, ದೇವದಾಸಿ ಪದ್ಧತಿಯ ವಿವರಣೆಯಲ್ಲಿಯೂ ಅತಿರಂಜಿತ ವರ್ಣನೆ ಇರುವಂತೆ ಕಾಣಿಸುತ್ತದೆ. ಭಾರತೀಯ ಸಂಪ್ರದಾಯಕ್ಕಿಂತ ಪಾಶ್ಚಾತ್ಯ ಸಂಪ್ರದಾಯವೇನೂ ಕೀಳಲ್ಲ ಎಂಬುದನ್ನು ತೋರಿಸಿಕೊಳ್ಳುವ ತುಡಿತವೂ ತುಲನಾತ್ಮಕ ವಿಶ್ಲೇಷಣೆಯಲ್ಲಿ ವ್ಯಕ್ತವಾಗಿದೆ. ಭಾರತೀಯ ದರ್ಶನದ ಆರಂಭವಾದುದೇ ಕಾಮದಿಂದ ಪಾಶ್ಚಾತ್ಯ ದರ್ಶನದ ಆರಂಭವಾದುದು ಬೆಳಕಿನಿಂದ ಎಂದು ಹೇಳುವುದರ ಮೂಲಕ ತಮ್ಮ ಸಂಪ್ರದಾಯವನ್ನು ಎತ್ತಿಹಿಡಿಯುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ ಎನಿಸುತ್ತದೆ.


ಲೇಖಕರ ಅನುಭವಕಥನವೆಂಬಂತೆ ನಿರೂಪಿತವಾಗಿರುವ ಈ ಗ್ರಂಥದಲ್ಲಿ ಹೇಳಿದ್ದೆಲ್ಲವನ್ನೂ ಸತ್ಯವೆಂದೇ ಪರಿಗಣಿಸಬೇಕಾಗಿಲ್ಲ ಅಸತ್ಯವೆಂದು ತೆಗೆದುಹಾಕುವ ಆವಶ್ಯಕತೆಯೂ ಇಲ್ಲ. ನೀರಕ್ಷೀರವಿಭಾಗ ವಿವೇಕದಿಂದ ಓದಿದರೆ ಉತ್ತಮವಾದ ಕೃತಿ. ಇನ್ನು ಅನುವಾದಕ ನವೀನ ಭಟ್ಟರು ಇದು ಇಂಗ್ಲೀಷಿನ ಅನುವಾದ ಎಂಬುದು ಅರಿವಾಗದಷ್ಟು ಸೊಗಸಾಗಿ ಭಾಷಾಂತರಿಸಿದ್ದಾರೆ. ತಮ್ಮ ಸಂಸ್ಕೃತ ಪಾಂಡಿತ್ಯವನ್ನೂ, ಆಲಂಕಾರಿಕ ಶಬ್ದಗಳನ್ನೂ ಅನವಶ್ಯಕವಾಗಿ ತುರುಕದೆ ಸರಳವಾದ ಅಷ್ಟೇ ಗಟ್ಟಿಯಾದ ಕನ್ನಡದಲ್ಲಿ ಅನುವಾದಿಸಿದ್ದಾರೆ. ಅಲ್ಲಲ್ಲಿ ಬರುವ ಪದ್ಯಗಳನ್ನೂ ಮುಕ್ತಛಂದಸ್ಸಿನಲ್ಲಿ ಸುಂದರವಾಗಿ ಭಾಷಾಂತರಿಸಿದ್ದಾರೆ. ಒಟ್ಟಿನಲ್ಲಿ ಓದಿಸಿಕೊಂಡು ಹೋಗುವ ಒಂದು ಚಂದದ ಪುಸ್ತಕವನ್ನು ವಸುಧೇಂದ್ರರ ’ಛಂದ ಪುಸ್ತಕ’  ನೀಡಿದೆ.

Tuesday, January 26, 2016

ಗೆಳೆಯ ರಾಮಚಂದ್ರ ಹೆಗಡೆಗೆ ಅಭಿನಂದನೆ.

೨೦೦೨ ನೇ ಇಸ್ವಿಯ ಆರಂಭದಲ್ಲಿ ಯು.ಜಿ.ಸಿ.ಯ ಒಂದು ಉಪಕ್ರಮದಲ್ಲಿ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಸಣ್ಣದೊಂದು ನೌಕರಿ ದೊರೆತಿತ್ತು. ಸಂಸ್ಕೃತಭಾರತಿಯ ಕಾರ್ಯಕರ್ತನಾದುದರಿಂದ ಸೋದರ ಸಂಸ್ಥೆ ವಿದ್ಯಾರ್ಥಿಪರಿಷತ್ತಿನ ಕಾರ್ಯಾಲಯದಲ್ಲಿ ನನ್ನ ವಾಸವ್ಯವಸ್ಥೆಯಾಗಿತ್ತು.ಅಲ್ಲಿಗೆ ಬಂದು ಹೋಗುತ್ತಿದ್ದ ಅನೇಕ ವಿದ್ಯಾರ್ಥಿಗಳಲ್ಲಿ ಒಬ್ಬ ದಿನ ಕಳೆದಂತೆ ನನಗೆ ಆಪ್ತನಾದ. ಅವನ ಮುಖದಲ್ಲಿ ಅದಮ್ಯ ಉತ್ಸಾಹ, ಉತ್ಕಟ ರಾಷ್ಟ್ರಾಭಿಮಾನ ಬತ್ತದ ಕ್ರಿಯಾಶೀಲತೆಗಳು ಪ್ರತಿಫಲನಗೊಂಡಿರುವುದನ್ನು ಗಮನಿಸಿದ್ದೆ. ಒಂದಿನ ಅವನ ಪ್ರೀತಿಯ ಕರೆಗೆ ಓಗೊಟ್ಟು ಪಕ್ಕದಲ್ಲೇ ಇದ್ದ ಅನಾಥಾಶ್ರಮವೆಂಬ ಛಾತ್ರಾವಾಸಕ್ಕೆ ಹೋಗಿದ್ದೆ. ತನ್ನ ಇಂಜಿನಿಯರಿಂಗ್ ಪುಸ್ತಕಗಳ ಮಧ್ಯದಿಂದ ಸಣ್ಣ ದಿನಚರಿ ಪುಸ್ತಕವನ್ನು ತೆಗೆದು ತಾನು ಬರೆದಿದ್ದ ನಾಲ್ಕಾರು ಮುಕ್ತಕಗಳನ್ನೂ ಒಂದೆರಡು ಕವಿತೆಗಳನ್ನೂ ತೋರಿಸಿದ. ನಾನು ಅವನಲ್ಲಿ ಕಂಡ ಗುಣಗಳು ಅಲ್ಲಿಯೂ ಪ್ರತಿಬಿಂಬಿತವಾಗಿದ್ದವು. ದೇಶದ ಬಗ್ಗೆ, ಯುವಕರ ಬಗ್ಗೆ ನಾವು ಗಂಟೆಗಟ್ಟಲೆ ಮಾತನಾಡುತ್ತಿದ್ದೆವು. ಅವನ ಪ್ರತಿ ಮಾತಿನಲ್ಲೂ ತಾನು ತನ್ನ ನೆಲಕ್ಕಾಗಿ, ನಮ್ಮ ಜನರಿಗಾಗಿ ಏನನ್ನಾದರೂ ಮಾಡಬೇಕು ಎಂಬ ತುಡಿತ ಕಾಣುತ್ತಿತ್ತು.
ನಾನು ಮೈಸೂರನ್ನು ಬಿಟ್ಟು ಗೋವಾಕ್ಕೆ ಬಂದ ಮೇಲೂ ಪತ್ರಗಳ ಮೂಲಕ ನಮ್ಮ ಸಂಪರ್ಕ ನಿರಂತರವಾಗಿತ್ತು. ನಾನೊಂದು ಹಸ್ತಪ್ರತಿಯ ಪತ್ರಿಕೆಯನ್ನು ಆರಂಭಿಸುತ್ತೇನೆ. ನೀವು ಅದಕ್ಕೆ ನಿರಂತರವಾಗಿ ಲೇಖನ ಬರೆಯಬೇಕು ಎಂದು ಒತ್ತಾಯಿಸುತ್ತಿದ್ದ. ಆಯಿತು ಎಂದು ಒಪ್ಪಿದ್ದೆ. ಹೀಗೆ ತನ್ನ ಸಹವಾಸಿ ನಾರಾಯಣ ಹೆಗಡೆ ಮತ್ತಿತರರನ್ನು ಕಲೆಹಾಕಿ ಏ೩ ಆಕಾರದ ಒಂದು ಹಾಳೆಯ ಒಂದೇ ಮಗ್ಗುಲಲ್ಲಿ ಬರೆದ ಪತ್ರಿಕೆಯನ್ನು ಆರಂಭಿಸಿಯೇ ಬಿಟ್ಟ. ೨೦೦೪ ರ ಮೇ ತಿಂಗಳಿನಲ್ಲಿ ಕಾರ್ಯನಿಮಿತ್ತ ಮೈಸೂರಿಗೆ ಹೋದಾಗ ’ಭಟ್ರೆ! ಇದು ನಿಮ್ಮ ಕೈಯಿಂದಲೇ ಬಿಡುಗಡೆ ಆಗಲಿ’ ಎಂದು ಕಾಗದದ ಸುರುಳಿಯೊಂದನ್ನು ನನ್ನ ಕೈಗಿತ್ತ. ಒಂದೆರಡು ಹೊಸ್ಟೆಲ್ ವಾಸಿಗಳ ಸಮ್ಮುಖದಲ್ಲಿ ಸರಳವಾಗಿ ’ಚೈತ್ರರಶ್ಮಿ – A ray of hope’ (ಖಾಸಗಿ ಪ್ರಸಾರಕ್ಕಾಗಿ ಮಾತ್ರ) ಬಿಡುಗಡೆಯಾಗಿತ್ತು. ತನ್ನ ಖರ್ಚಿನಲ್ಲಿಯೇ ಒಂದೆರಡು ಝೆರೊಕ್ಸ್ ಪ್ರತಿಗಳನ್ನು ಮಾಡಿ ಓದುವವರಿಗೆ ಮಾತ್ರ ಹಂಚಿದ. ಈ ಪತ್ರಿಕೆ ಅವಕಾಶವಂಚಿತ ಗ್ರಾಮೀಣ ಯುವಬರಹಗಾರರಿಗೆ ಒಂದು ವೇದಿಕೆಯಾಗಬೇಕೆಂದು ಅವನ ಆಸೆಯಾಗಿತ್ತು. ಮುಂದೆ ಸಾವಕಾಶವಾಗಿ ಹಸ್ತಪ್ರತಿ ಡಿ.ಟಿ.ಪಿ.ಗೆ ತಿರುಗಿ, ಪುಸ್ತಕದ ಆಕಾರವನ್ನು ಪಡೆದುಕೊಂಡುದೂ ಅಲ್ಲದೆ ಓದುಗರು ಹಾಗೂ ಬರಹಗಾರರ ಸಂಖ್ಯೆ ನಾಲ್ಕರಿಂದ ಎಂಟಾಗಿ, ಎಂಟರಿಂದ ಹದಿನಾರಾಗಿ ಬೆಳೆಯುತ್ತ ತನ್ನ ವ್ಯಾಪ್ತಿಯನ್ನು ಮೈಸೂರಿನಿಂದ ಬೆಂಗಳೂರು, ಕರಾವಳಿ, ಮಲೆನಾಡು, ಬಯಲುಸೀಮೆಗಳಲ್ಲೆಲ್ಲ ವಿಸ್ತರಿಸಿತ್ತು. ಅದೊಂದು ಪತ್ರಿಕೆಯಾಗಷ್ಟೆ ಉಳಿಯದೆ ಪ್ರೀತಿಯ ಸಂಬಂಧಗಳ ಭಾವಯಾನವಾಗಿ ’ಚೈತ್ರರಶ್ಮಿ’ ಪರಿವಾರವನ್ನು ಹುಟ್ಟುಹಾಕಿತ್ತು.

ನಾನು ಯಾರ ಬಗ್ಗೆ ಬರೆಯುತ್ತಿರುವೆ ಎನ್ನುವುದು ನಿಮಗೆ ಇನ್ನೂ ಒಗಟಾಗಿಯೆ ಇದೆಯೇ? ಇರಲಿಕ್ಕಿಲ್ಲ. ನಿಜ, ಇದು ಅದೇ ರಾಚಂ ಅಥವಾ ರಾಮಚಂದ್ರ ಹೆಗಡೆಯವರ ’ಚೈತ್ರರಶ್ಮಿ’ಯ ಕಥೆ.

ಇಂದು ಆ ಪತ್ರಿಕೆ ಇಲ್ಲದೆ ಇರಬಹುದು. ಆದರೆ ಅದು ಯುವ ಬರಹಗಾರರಲ್ಲಿ ಮೂಡಿಸಿದ ಸಂಚಲನ ಅವರ್ಣನೀಯ. ಕಲ್ಲಬ್ಬೆಯ ಪ್ರಿಯಕ್ಕ, ಕರ್ಕಿಸವಲಿನ ಸುಧಕ್ಕ, ಗಂಗೋತ್ರಿಯ ನವೀನ, ಹಳವಳ್ಳಿಯ ನರಸಿಂಹಣ್ಣ, ಎನ್ವೀ, ಸಂಜಯ, ಸೋದರಿ ರಜನಿ ಹಾಗೂ ನಾನು ಬೆಳೆದಿದ್ದು ಚೈತ್ರರಶ್ಮಿಯಿಂದ ಅಲ್ಲದಿರಬಹುದು. ಆದರೆ ಆಗ ಬೆಳಕಿಗೆ ಬಂದಿದ್ದು ಚೈತ್ರರಶ್ಮಿಯಿಂದ ಎಂದು ಧೈರ್ಯವಾಗಿ ಹೇಳಬಲ್ಲೆ. ನಮ್ಮೆಲ್ಲರ ಮೊಳಕೆಯೊಡೆಯುತ್ತಿದ್ದ ಪ್ರತಿಭೆಗೆ ಚೈತ್ರರಶ್ಮಿ ಒಂದು ದಿಕ್ಕನ್ನು ತೋರಿಸಿತು ಎಂದೂ ನಿಸ್ಸಂಶಯವಾಗಿ ಹೇಳಬಲ್ಲೆ.  ಉದ್ಯೋಗವಿಲ್ಲದೆ ಅಲೆಯುತ್ತಿದ್ದ ಕಾಲದಲ್ಲಿಯೂ ರಾಚಂ ತಮ್ಮ ಕಾಯಕವನ್ನು ಬಿಡಲಿಲ್ಲ. ಲೇಖಕರನ್ನೂ ಓದುಗರನ್ನೂ ಅವರಷ್ಟಕ್ಕೇ ಬಿಡದೆ ಅವರ ಮನೆಗೆ ಹೋಗಿ ಒಂದು ದಿನ ಉಳಿದು, ಅವರ ಬಗ್ಗೆ ಸಂಪೂರ್ಣ ತಿಳಿದುಕೊಂಡು ಬಾಂಧವ್ಯವನ್ನು ಸ್ಥಾಪಿಸಿದಾಗಲೇ ಅವರಿಗೆ ಸಮಾಧಾನ.

ನಾಯಕ ಆಲದಮರದಂತೆ ಆದರೆ ಇತರರಿಗೆ ತಂಪಾದ ನೆರಳನ್ನಷ್ಟೇ ನೀಡಬಲ್ಲ. ಆ ನೆರಳಲ್ಲಿ ಇನ್ಯಾವುದೇ ಗಿಡ ಬೆಳೆಯುವುದಿಲ್ಲ. ಆದರೆ ಇಲ್ಲಿ ಹಾಗಾಗಲಿಲ್ಲ. ತನ್ನ ಗೆಳೆಯರ ಕವನ ಸಂಕಲನಗಳು ತಯಾರಾದಾಗ ಅವರಿಗಿಂತ ಹೆಚ್ಚು ಸಂಭ್ರಮಿಸಿದ್ದು ಈ ರಾಮು. ಪುಸ್ತಕದ ಡಿ.ಟಿ.ಪಿ.ಯಿಂದ ಹಿಡಿದು ಬಿಡುಗಡೆಯವರೆಗೆ ಅವರೊಂದಿಗೆ ನಿಂತು ಎಲ್ಲವನ್ನೂ ಸರಿಯಾಗಿದೆ ಎಂದು ಮನದಟ್ಟಾದಾಗಲೇ ಅವರಿಗೆ ಸಮಾಧಾನ.

ಬರಹಗಾರನಿಗೆ ಸಾಮಾಜಿಕ ಬದ್ಧತೆ ಇರಲೇಬೇಕು ಎಂದು ಪ್ರತಿಪಾದಿಸುವ ರಾಚಂ ಬರಹ-ಕೃತಿ ಪರಸ್ಪರ ವಿರುದ್ಧವಾಗಿರುವ ಲೇಖಕರ ಮೇಲೆ ಹರಿಹಾಯುತ್ತಾರೆ. ತಮ್ಮ ಇಂಜಿನಿಯರ್ ಗೆಳೆಯರೊಂದಿಗೆ ಸಮಾಜ ಸೇವಕರ ಸಮಿತಿಯನ್ನು ರಚಿಸಿಕೊಂಡು ನೆರವು ಬೇಕಾದಲ್ಲಿ ಧಾವಿಸುವ ಇವರ ಸಾಮಾಜಿಕ ಬದ್ಧತೆ ಪ್ರಶ್ನಾತೀತ. ೨೦೧೦ರಲ್ಲಿ ಉತ್ತರಕರ್ನಾಟಕ ನೆರೆಹಾವಳಿಗೆ ತುತ್ತಾದಾಗ ತಮ್ಮ ಗೆಳೆಯರೊಂದಿಗೆ ಅವರ ನೆರವಿಗೆ ಧಾವಿಸಿದ್ದಲ್ಲದೆ, ಅಲ್ಲಿಯ ಚಿತ್ರಣ ಮನಮುಟ್ಟುವಂತೆ ’ನೆರೆಯ ನೋವಿಗೆ ಸ್ಪಂದನ’ ಎಂಬ ಪುಸ್ತಕವನ್ನೂ ಹೊರತಂದು ಹಂಚಿದರು. ಇನ್ಫೋಸಿಸ್ ಸೇರಿದ ಮೇಲೂ ಅಲ್ಲಿಯೂ ತಮ್ಮ ಸಾಮಾಜಿಕ ಸೇವೆಯನ್ನು ಮುಂದುವರಿಸಿದ್ದಾರೆ.

ನನ್ನ ಮತ್ತು ಅವರ ಮೈತ್ರಿ ಹೆಚ್ಚು ಬೆಳೆಯಲು ಇಬ್ಬರೂ ಮಂಕುತಿಮ್ಮನ ಭಕ್ತರಾಗಿದ್ದು ಕಾರಣ ಅನಿಸುತ್ತಿದೆ. ನನ್ನ ಮದುವೆ ನಿಶ್ಚಿತವಾದಾಗ ಇವರು ಗಾಬರಿಯಾಗಿದ್ದರು. ಸಂಸಾರಕೂಪದಲ್ಲಿ ಬಿದ್ದು ಭಟ್ಟರೆಲ್ಲಿ ಕಾಣೆಯಾಗಿ ಬಿಡುತ್ತಾರೊ ಎಂಬ ಭಯ ಅವರಲ್ಲಿತ್ತು. ನನ್ನ ಭಾವೀ ಪತ್ನಿಯ ವಿಳಾಸವನ್ನು ಇಸಕೊಂಡು ’ಭಟ್ಟರನ್ನು ಸಂಪೂರ್ಣ ಹೈಜಾಕ್ ಮಾಡಿಬಿಡಬೇಡಿ. ನಮಗೂ ಸ್ವಲ್ಪ ಉಳಿಸಿ’ ಎಂದು ಪತ್ರ ಬರೆದಿದ್ದನ್ನು ನನ್ನ ಪತ್ನಿ ಇಂದಿಗೂ ಸ್ಮರಿಸುತ್ತಾಳೆ. ಗೆಳೆಯರೊಂದಿಗೆ ವ್ಯವಹರಿಸುವಾಗ ಅದೇ ಮುಗ್ಧತೆ ಅವರ ಮಾತಿನಲ್ಲಿ. ಇನ್ಫೋಸಿಸ್ ಸೇರಿದ ಹೊಸದರಲ್ಲಿ ಮೊದಲ ಬಾರಿ ವಿಮಾನ ಪ್ರಯಾಣದ ಅವಕಾಶ ದೊರೆತಾಗ ಗೆಳೆಯರಿಗೆಲ್ಲ ಫೋನ್ ಮಾಡಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದು ಇನ್ನೂ ನೆನಪಿದೆ.

ಅವರಿಗೆ ಸಿಕ್ಕಿದ್ದು ಪದ್ಮಪ್ರಶಸ್ತಿಯೋ ಭಾರತರತ್ನವೋ ಆಗಿಲ್ಲದಿರಬಹುದು. ಆದರೂ ಅವರ ಸ್ನೇಹಿತರು ಸಂಭ್ರಮಪಡುವುದರಲ್ಲಿ ಅರ್ಥವಿದೆ. ಇದು ಅವರು ಅರ್ಜಿಹಾಕಿ ಅಥವಾ ವಶೀಲಿ ಹಚ್ಚಿ ಪಡೆದ ಪ್ರಶಸ್ತಿಯಲ್ಲ. ಪ್ರಶಸ್ತಿ ಅವರನ್ನು ಅರಸಿ ಬಂದಿದೆ. ಎಷ್ಟೋ ಎಲೆಮರೆಯ ಕಾಯಿಗಳನ್ನು ಹೊರಗೆ ತಂದು ಅವರಲ್ಲಿರುವ ಸಿಹಿಯನ್ನು ಸಮಾಜಕ್ಕೆ ತೋರಿದ ವ್ಯಕ್ತಿ ಎಲೆಮರೆಯ ಕಾಯಾಗಿಯೇ ಇರುವುದು ತರವಲ್ಲ. ಈ ಪ್ರಶಸ್ತಿ ಅವರ ಹೆಚ್ಚಿನ ಸಾಧನೆಗೆ ಪ್ರೇರಣೆಯಾಗಲಿ, ಪ್ರಶಸ್ತಿಯ ಮಾಯೆ ಅವರನ್ನು ಆವರಿಸದಿರಲಿ ಎಂದು ಆಶಿಸೋಣ.


ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...